ಮಂಗಳೂರು: ನವಮಂಗಳೂರು ಬಂದರ್ ನಲ್ಲಿ ಕಲ್ಲಿದ್ದಲು ಸಾಗಾಟದ ಲಾರಿಯೊಂದು ನಿಯಂತ್ರಣ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಹಾಗೂ ಕ್ಲೀನರ್ ಮೃತದೇಹ ಪತ್ತೆಯಾಗಿದೆ. ವಾಹನ ನಿರ್ವಾಹಕ ಭೀಮಪ್ಪ(22) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಡೆಲ್ಟಾ ಕಂಪನಿಯ 10 ಚಕ್ರದ ಬಾಡಿ ಲಿಫ್ಟ್ ನ ಲಾರಿಯೊಂದು ಎನ್ಎಂಪಿಟಿಯ 14ನೇ ಬರ್ತ್ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ ಸಿಐಎಸ್ಎಫ್ ನ ಸಿಬ್ಬಂದಿಗಳು ಲಾರಿಯ ಚಾಲಕನ ಮೃತದೇಹ ಹೊರತೆಗೆದಿದ್ದರು. ಆತನನ್ನು ಬಾಗಲಕೋಟೆ ಮೂಲದ ರಾಜೇಸಾಬ್ (26) ಎಂದು ಗುರುತಿಸಲಾಗಿತ್ತು.
ಟ್ರಕ್ನಲ್ಲಿ ಕಂಡೆಕ್ಟರ್ ಆಗಿದ್ದ ಭೀಮಪ್ಪ ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿತ್ತು. ಇಂದು ವಾಹನವನ್ನು ಹೊರತೆಗೆಯಲಾಗಿದ್ದು, ಭೀಮಪ್ಪನ ಮೃತದೇಹವನ್ನೂ ಹೊರತೆಗೆಯಲಾಗಿದೆ. ಭೀಮಪ್ಪ ಕೂಡ ಬಾಗಲಕೋಟೆ ಜಿಲ್ಲೆಯ ಮೂಲದವನಾಗಿದ್ದಾನೆ. ಪಣಂಬೂರು ಪೋಲಿಸ್ ಠಾಣೆಯಲ್ಲಿ ಘಟನೆಯ ಕುರಿತಂತೆ ಪ್ರಕರಣ ದಾಖಲಾಗಿದೆ.