ಮೈಸೂರು: ತಾನು ಬೈದಿದ್ದಕ್ಕೆ ತಮ್ಮ ಆತ್ಮಹತ್ಯೆ ಮಾಡಿಕೊಂಡ ಅಂತಾ ಅಣ್ಣ ಕೂಡ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ್ (28) ಹಾಗೂ ಹರೀಶ್ (26) ಮೃತ ದುರ್ದೈವಿಗಳು. ರೈತನಾಗಿದ್ದ ಹರೀಶ್ ಟ್ರಾಕ್ಟರ್ ನ್ನು ಸಿಕ್ಕಾಪಟ್ಟೆ ಫಾಸ್ಟ್ ಆಗಿ ಓಡಿಸುತ್ತಿದ್ದನಂತೆ.ಅದಕ್ಕಾಗಿ ಹರೀಶ್ ತಂದೆ ಬುದ್ಧಿ ಹೇಳಿದ್ದರು. ಇತ್ತ ಮೈಸೂರಿನಲ್ಲಿದ್ದ ದೊಡ್ಡ ಮಗ ವೆಂಕಟೇಶ್ ಗೆ ಕರೆ ಮಾಡಿ ತಮ್ಮನಿಗೆ ಬುದ್ಧಿ ಹೇಳುವಂತೆ ತಂದೆ ಹೇಳಿದ್ದರು. ಅದರಂತೆ ವೆಂಕಟೇಶ್ ಕರೆ ಮಾಡಿ ತಮ್ಮನಿಗೆ ಬುದ್ಧಿ ಹೇಳಿದ್ದರು. ಆದರೆ ತನ್ನ ಪ್ರೀತಿಯ ಅಣ್ಣ ನನಗೆ ಬೈದ ಎಂದು ಮನನೊಂದ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ತಮ್ಮ ಸಾವಿನ ಸುದ್ದಿ ಕೇಳಿ ವೆಂಕಟೇಶ್ ಕುಗ್ಗಿ ಹೋಗಿದ್ದಾರೆ. ಅಲ್ಲದೇ ತಮ್ಮ ಆತ್ಮಹತ್ಯೆ ಮಾಡಿಕೊಂಡ ಫೋಟೋ ನೋಡಿದ ಮೇಲಂತೂ ವೆಂಕಟೇಶ್ ಇನ್ನಷ್ಟು ಕುಗ್ಗಿದ್ದಾರೆ. ತನ್ನಿಂದಲೇ ತಮ್ಮನ ಸಾವಾಯ್ತು ಅಂತಾ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ಅಗಲಿಕೆ ಇಡೀ ಕುಟುಂಬವನ್ನು ಕಣ್ಣೀರಿನ ಕಡಲಿನಲ್ಲಿ ಮುಳುಗಿಸಿದೆ.ಅಕ್ಕಪಕ್ಕದಲ್ಲೇ ಇಬ್ಬರ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಸಂಬಂಧ ಎಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.