ಮಂಗಳೂರು: ದೈವಗಳ ಕ್ಷೇತ್ರಕ್ಕೆ ಹರಕೆ ಸೇವೆ ನೀಡುವ ಸಲುವಾಗಿ ಪುತ್ತೂರು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚೀಲದಲ್ಲಿ ಕೋಳಿ ಹಿಡಿದುಕೊಂಡಿದ್ದರು. ಚೀಲದಲ್ಲಿದ್ದ ಕೋಳಿಗೂ ಕಂಡಕ್ಟರ್ 50 ರೂಪಾಯಿ ಪಡೆದುಕೊಂಡು ಟಿಕೆಟ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಘಟನೆ ಪುತ್ತೂರು ವಿಭಾಗದ ಕೆಎಸ್ಆರ್ಟಿಸಿ ಬಸ್ ಒಂದರಲ್ಲಿ ನಡೆದಿದೆ.
ಈ ಘಟನೆಯನ್ನು ಹೊರ ಜಗತ್ತಿಗೆ ತಿಳಿಸಿದವರು ಪುತ್ತೂರು ಶಾಸಕ ಸಂಜೀವ ಮಠಂದೂರು. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಸಾರಿಗೆ ಅದಾಲತ್ನಲ್ಲಿ ಈ ವಿಷಯ ಬಹಿರಂಗಪಡಿಸಿ ಸಾರಿಗೆ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಕೇಳಿಕೊಂಡರು.
ಉತ್ತರಿಸಿದ ವಿಭಾಗೀಯ ಸಂಚಲನಾ ಅಧಿಕಾರಿ ಮುರಳೀಧರ್ ರವರು ಸಾರಿಗೆ ನಿಯಮದ ಪ್ರಕಾರ ಸಂಸ್ಥೆಯ ಸಾರಿಗೆಯಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪಕ್ಷಿ, ಪ್ರಾಣಿ ಯಾವುದೂ ಒಯ್ಯುವುದು ನಿಷಿದ್ದ, ಆದರೂ ಸರಿ, ಒಂದು ಕೋಳಿಗೆ ಒಬ್ಬ ಪ್ರಯಾಣಿಕನಷ್ಟೇ ದರವನ್ನು ನಿಗದಿಪಡಿಸಬೇಕೆಂಬ ನಿಯಮವಿದೆ. 50 ರೂ. ವಿಧಿಸಿದ್ದಾರೆ ಎಂದರೆ ಬಹುಶಃ 3 ಕೋಳಿ ಇದ್ದಿರಬಹುದು. ಈ ನಿಯಮ ದ ಕಾರಣ ನಾವೇನೂ ಮಾಡುವಂತಿಲ್ಲ ಎಂದರು.
ಕೋಳಿ ವಿಚಾರದಲ್ಲಿ ವಿನಾಯಿತಿ ನೀಡಬೇಕೆಂದು ಶಾಸಕರು ಪತ್ರ ನೀಡಿದಲ್ಲಿ ಅದನ್ನು ಸರಕಾರಕ್ಕೆ ಕಳುಹಿಸಬಹುದು. ಅದು ಬಿಟ್ಟು ನಮಗೆ ಬೇರೆ ದಾರಿಯೇ ಇಲ್ಲ ಎಂದು ಮುರಳಿಧರ್ ಸಭೆಗೆ ಮಾಹಿತಿ ನೀಡಿದರು.