Wednesday, June 3, 2026
Homeತಾಜಾ ಸುದ್ದಿಮೈಸೂರಿನ ಸರಗೂರು ನೀರು ಕುಡಿಯಲು ಬಂದು ಮೀನಿನ ಬಲೆಯಲ್ಲಿ ಸಿಲುಕಿ ಹಾಕಿಕೊಂಡ ಆನೆ: ಬರೋಬ್ಬರಿ 8...

ಮೈಸೂರಿನ ಸರಗೂರು ನೀರು ಕುಡಿಯಲು ಬಂದು ಮೀನಿನ ಬಲೆಯಲ್ಲಿ ಸಿಲುಕಿ ಹಾಕಿಕೊಂಡ ಆನೆ: ಬರೋಬ್ಬರಿ 8 ಗಂಟೆ ಕಾರ್ಯಾಚರಣೆ ನಡೆಸಿ ಗಜರಾಜನ ರಕ್ಷಣೆ

- Advertisement -
- Advertisement -

ಮೈಸೂರು : ನೀರು ಕುಡಿಯಲು ಬಂದ ಕಾಡಾನೆಯೊಂದು ಮೀನುಗಾರರು ಹಾಕಿದ್ದ ಬಲೆಗೆ ಸಿಲುಕಿದ ಘಟನೆ ಸರಗೂರು ತಾಲೂಕಿನ ಬಿರ್ವಾಳ್ ಗ್ರಾಮದ ನುಗು ವನ್ಯಜೀವಿ ವಲಯ ವ್ಯಾಪ್ತಿಯ ನುಗು ಜಲಾಶಯದ ಹಿನ್ನೀರಿನಲ್ಲಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.

ನಿನ್ನೆ ಬೆಳಗ್ಗೆ ನುಗು ಜಲಾಶಯದ ಸಿಬ್ಬಂದಿ ಜಲಾಶಯದ ವಿದ್ಯುದ್ದೀಪವನ್ನು ಆರಿಸಲು ಬಂದಾಗ ಕಾಡಾನೆ ಬಲೆಯಲ್ಲಿ ಸಿಲುಕಿರುವ ದೃಶ್ಯ ಕಂಡು ಬಂದಿದೆ. ಕೂಡಲೇ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಮೇರೆಗೆ ಸ್ಥಳಕ್ಕೆ ಹೆಡಿಯಾಲ ವನ್ಯಜೀವಿ ವಲಯದ ಎಸಿಎಫ್ ರವಿಶಂಕರ್ ನೇತೃತ್ವದಲ್ಲಿ ಸಿಬ್ಬಂದಿ ಆಗಮಿಸಿದ್ದು ಬಳಿಕ ದೋಣಿಯನ್ನು ತರಿಸಿ ಕಾರ್ಯಾಚರಣೆ ನಡೆಸುವ ಮೂಲಕ ಮೀನು ಬಲೆಗೆ ಸಿಲುಕಿದ್ದ ಕಾಡಾನೆಯನ್ನು ರಕ್ಷಿಸಲು ಮುಂದಾಗಿ ಬೋಟ್ ಮೂಲಕ ಬಲೆಯಿಂದ ಅದನ್ನು ಬಿಡಿಸಲು ಪ್ರಯತ್ನ ಪಟ್ಟರು. ಆದರೆ ಸಾಧ್ಯವಾಗದೆ ಕಾರ್ಯಾಚರಣೆ ವಿಫಲವಾಯಿತು. ಆದರೂ ಧೈರ್ಯಗೆಡದೆ ಕಾರ್ಯಾಚರಣೆ ಮುಂದುವರೆಸಿದರು.

ಇನ್ನೇನು ಅನೆ ವೈದ್ಯರು, ಸಾಕಾನೆ ಅರ್ಜುನನ್ನು ಕರೆಯಿಸಿ ಕಾರ್ಯಾಚರಣೆಗೆ ತಯಾರಿ ನಡೆಸುತ್ತಿರುವಾಗಲೇ ಬೋಟ್ ಶಬ್ದಕ್ಕೆ ಮೀನಿನ ಬಲೆಗೆ ಸಿಲುಕಿದ್ದ ಕಾಡಾನೆ ಬಲೆಯಿಂದ ಬಿಡಿಸಿಕೊಂಡು ಹಿನ್ನೀರಿನ ದಡ ಸೇರಿದೆ. ಇದರಿಂದ ಕಾಡಾನೆಯ ರಕ್ಷಣೆಗಾಗಿ ಹರ ಸಾಹಸಪಡುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

- Advertisement -

Latest News

error: Content is protected !!