ವಿಟ್ಲ: ವಿಟ್ಲ ಕಸಬಾ ಗ್ರಾಮದ ಮಾರ್ನಮಿಗುಡ್ಡೆ ಎಂಬಲ್ಲಿರುವ ಹಾರ್ಡ್ ವೇರ್ ಅಂಗಡಿಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಯನ್ನು ಘಟನೆ ನಡೆದ ತಕ್ಷಣವೇ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಬಜ್ಪೆ ಕೊಂಚಾರು ನಿವಾಸಿ ಮಹಮ್ಮದ್ ರಫೀಕ್ ಬಂಧಿತ ಆರೋಪಿ.
ವಿಟ್ಲ ಕಸಬ ಗ್ರಾಮದ ಮಾರ್ನಮಿಗುಡ್ಡೆ ಚರ್ಚ್ ಬಳಿ ಇರುವ ರಾಕೇಶ್ ಶೆಟ್ಟಿ ಅವರ ರಿಧ್ವಿ ಹಾರ್ಡವೇರ್ ಅಂಗಡಿಗೆ ದ್ವಿಚಕ್ರದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಂಗಡಿಯ ಡ್ರಾಯರನಲ್ಲಿದ್ದ ನಗದು 17 ಸಾವಿರ ರೂಪಾಯಿ ಹಣ ಕಳವುಗೈದಿದ್ದಾರೆ. ಅಂಗಡಿ ಮಾಲಕರು ಬರುತ್ತಿದ್ದಂತೆ ತನ್ನ ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು.
ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಒಂದು ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದು, ಆತನ ಬಳಿ ಮಾಧ್ಯಮದ ಐಡಿ ಕಾರ್ಡ್ ಪತ್ತೆಯಾಗಿದೆ. ಮಾಧ್ಯಮದ ಹೆಸರು ಬಳಸಿಕೊಂಡು ಯಾರು ಇಲ್ಲದ ಅಂಗಡಿಗಳ ಒಳಹೋಗಿ ಕಳ್ಳತನಕ್ಕೆ ಪ್ರಯತ್ನ ನಡೆಸುತ್ತಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.