ಹೈದರಾಬಾದ್: ತೆಲಂಗಾಣದ ಮಾಜಿ ಸಚಿವ ಮತ್ತು ಪ್ರಸ್ತುತ ಡೆಪ್ಯುಟಿ ಸ್ಪೀಕರ್ ಆಗಿರುವ ಟಿ. ಪದ್ಮ ರಾವ್ ಅವರ ಮೊಮ್ಮಗಳು ಪ್ರಖ್ಯಾತ ತೆಲುಗು ಟಿವಿ ನಿರೂಪಕಿ ಕಾತಿ ಕಾರ್ತಿಕಾ ವಿರುದ್ಧ ವಂಚನೆ ಪ್ರಕರಣವೊಂದು ದಾಖಲಾಗಿದೆ.
ಬಿಲ್ಡರ್ ಒಬ್ಬರಿಗೆ 1 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಕಾರ್ತಿಕಾ ಮತ್ತು ಆಕೆಯ ಸಹಚರರ ವಿರುದ್ಧ ಹೈದರಾಬಾದಿನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಮತ್ತು ಆಕ್ಷೇಪಣಾ ರಹಿತ ಪ್ರಮಾಣಪತ್ರ (NoCs) ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದಳು ಎಂಬ ಆರೋಪ ಕಾರ್ತಿಕಾ ಮೇಲಿದೆ.
ತೆಲಂಗಾಣದ ಡುಬ್ಬಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಕಾರ್ತಿಕಾ ಕಣಕ್ಕಿಳಿದಿದ್ದು, ಇದರ ಬೆನ್ನಲ್ಲೇ ಆಕೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅಂದಹಾಗೆ ಕಾರ್ತಿಕಾ ಬಿಗ್ಬಾಸ್ ಮೂಲಕ ತೆಲಂಗಾಣದಲ್ಲಿ ಪ್ರಖ್ಯಾತಿ ಗಳಿಸಿಕೊಂಡಿದ್ದಾರೆ.
ಟಚ್ಸ್ಟೋನ್ ಪ್ರಾಪರ್ಟಿ ಡೆವಲಪರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ದೊರೆಸ್ವಾಮಿ ಎಂಬುವರು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ ದೊರೆಸ್ವಾಮಿ ಅವರು ಕಾರ್ತಿಕಾ ಹಾಗೂ ಆಕೆಯ ಸಹಚರರ ಒಡೆತನದ ಕಾರ್ತಿಕಾ ಬಿಆರ್ಎಂ ಸಂಸ್ಥೆಗೆ ಒಂದು ಕೋಟಿ ರೂ. ಡೆಪಾಸಿಟ್ ಮಾಡಿದ್ದರಂತೆ0. ಮೇದಕ್ ಜಿಲ್ಲೆಯ ಅಮೀನ್ಪುರದಲ್ಲಿರುವ 52 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಿಕೊಡುವುದಾಗಿ ಹೇಳಿ ಹಣವನ್ನು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.
52 ಎಕರೆ ಜಾಗದಲ್ಲಿ ಹೌಸಿಂಗ್ ಪ್ರಾಜೆಕ್ಟ್ ಮಾಡಲು ದೊರೆಸ್ವಾಮಿ ಯೋಜನೆ ರೂಪಿಸಿದ್ದರಂತೆ. ಯಾವುದೇ ತೊಡಕಾಗದಂತೆ ತೆಲಂಗಾಣ ಸರ್ಕಾರದಿಂದ ಆಕ್ಷೇಪಣಾ ರಹಿತ ಪ್ರಮಾಣಪತ್ರ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾಳೆಂದು ಆರೋಪಿಸಲಾಗಿದೆ. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.