ಪುತ್ತೂರು: ಹೆತ್ತವರ ಮೇಲೆ ಮಕ್ಕಳು ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿದ್ದು ಇಂದು ಮತ್ತೊಂದು ಅಂತಹುದೇ ಪ್ರಕರಣ ತಂದೆಯ ಹತ್ಯೆಯಲ್ಲಿ ಅಂತ್ಯವಾಗಿದೆ.
ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ತಂದೆ ಮತ್ತು ಮಗನ ನಡುವೆ ಜಗಳ ಉಂಟಾಗಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ತಂದೆ ಅಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಾರೆ.

ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಬಾಲಯದ ಗಂಗಾಧರ್ ನಾಯ್ಕ ಮೃತಪಟ್ಟವರು . ಮಗ ಶಶಿಧರ್ ನಾಯ್ಕ ಯಾನ್ ಕೃಷ್ಣನಗರ ಶಶಿ ತಂದೆ ಮೇಲೆ ಹಲ್ಲೆಗೈದವರು ಎನ್ನಲಾಗಿದೆ. ಬಾಲಯದಲ್ಲಿ ಆ.17 ರಂದು ರಾತ್ರಿ ಈ ಕೃತ್ಯ ಘಟಿಸಿದೆ.
ಗಂಭೀರ ಗಾಯಗೊಂಡ ಗಂಗಾಧರ ನಾಯ್ಕರವರನ್ನು ಮೊದಲು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.
ಅವರ ಪುತ್ರ ಶಶಿಧರ್ ಅವರ ತಲೆಗೆ ಸಣ್ಣ ಮಟ್ಟಿನ ಗಾಯವಾಗಿದೆ ಎಂದು ತಿಳಿದು ಬಂದಿದೆ. ಶಶಿಧರ್ ಪುತ್ತೂರು ಸಮೀಪದ ಕೃಷ್ಣನಗರ ನಿವಾಸಿ. ಈತ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ತಂದೆ ಮತ್ತು ಮಗನ ನಡುವಿನ ಕಲಹಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರಿಬ್ಬರ ನಡುವೆ ಅಗಾಗ ಕಲಹ ನಡೆಯುತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಿತಿವಂತರಾದ ಕಟುಂಬಕ್ಕೆ ಪುತ್ತೂರು ತಾಲೂಕಿನ ಕೃಷ್ಣನಗರದಲ್ಲಿ ಮನೆ ಮತ್ತು ಕೆದಂಬಾಡಿಯ ಬಾಲಯದಲ್ಲಿ ಕೃಷಿ ಭೂಮಿ ಹೊಂದಿತ್ತು. ಮಾದಕ ವಸ್ತುವಿನ ಸೇವನೆಯಿಂದ ಕೃತ್ಯ ನಡೆದಿರಬಹುದು ಎಂಬ ಶಂಕೆ ಸ್ಥಳೀಯವಾಗಿ ವ್ಯಕ್ತವಾಗಿದ್ದು ಪೊಲೀಸ್ ತನಿಖೆಯಿಂದ ಖಚಿತ ಮಾಹಿತಿ ಬಹಿರಂಗವಾಗಬೇಕಿದೆ. ಘಟನೆಯೂ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.