ಕಾಸರಗೋಡು: ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಪಾರ್ಥಿವ ಶರೀರದ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಂತೆಯೇ ವೃದ್ಧರೊಬ್ಬರು ಅಸ್ವಸ್ಥಗೊಂಡು ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಮಂಗಳವಾರ ಕಾಸರಗೋಡಿನಲ್ಲಿ ನಡೆದಿದೆ.
ಕೊಟ್ಟಾಯಂನ ಎರವಿನಲ್ಲೂರಿನ ಕರಿವೇಲಿ ಇಲ್ಲಂನ ಭಾಗವತ ಸಪ್ತಾಹ ಯಜ್ಞ ಆಚಾರ್ಯ ಹಾಗೂ ಪಾಠಕಂ ಕಲಾವಿದ ಎನ್. ದೇವದತ್ತನ್ ನಂಬೂತಿರಿ (88) ಮತ್ತು ಅವರ ಪತ್ನಿ ಗಿರಿಜಾದೇವಿ ಅಂತರ್ಜನಂ (75) ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾದ ದಂಪತಿ.
ವಿದ್ಯಾನಗರದ ಪರಕ್ಕಟ್ಟದಲ್ಲಿರುವ ತಮ್ಮ ಮಗನ ಮನೆಯಲ್ಲಿ ವಾಸವಾಗಿದ್ದ ಗಿರಿಜಾದೇವಿ ಅಂತರ್ಜನಂ ಅವರು ಸೆಪ್ಟೆಂಬರ್ 14ರಂದು ರಾತ್ರಿ 11:30ರ ಸುಮಾರಿಗೆ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪತ್ನಿಯ ಅಗಲಿಕೆಯ ವಿಷಯ ತಿಳಿದ ದೇವದತ್ತನ್ ನಂಬೂದಿರಿ ಅವರು ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತು ಭಕ್ತಿಯಿಂದ ಪ್ರಾರ್ಥನೆ ಪಠಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ಮೃತ ದಂಪತಿಯ ಅಂತ್ಯಕ್ರಿಯೆಯನ್ನು ಕೊಟ್ಟಾಯಂನ ಎರವಿನಲ್ಲೂರಿನಲ್ಲಿರುವ ಅವರ ಪೂರ್ವಜರ ಮನೆಯಾದ ಕರಿವೇಲಿ ಇಲ್ಲಂನ ಆವರಣದಲ್ಲಿ ನೆರವೇರಿಸಲಾಯಿತು. ಹಿರಿಯ ಕಲಾವಿದ ಹಾಗೂ ಅವರ ಧರ್ಮಪತ್ನಿಯ ದಿಢೀರ್ ಅಗಲಿಕೆಯಿಂದ ಕುಟುಂಬಸ್ಥರು, ಸಂಬಂಧಿಕರು ಹಾಗೂ ಅಭಿಮಾನಿಗಳು ತೀವ್ರ ಶೋಕಸಾಗರದಲ್ಲಿ ಮುಳುಗಿದ್ದಾರೆ.


