
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 59ನೇ ಸಿಸಿಹೆಚ್ ನ್ಯಾಯಾಲಯವು ಸೋಮವಾರ (ಆಗಸ್ಟ್ 17) ಮಹತ್ವದ ಆದೇಶ ಪ್ರಕಟಿಸಿದೆ.
ಪ್ರಕರಣದ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ (ಪಾಟಿ ಸವಾಲು) ಆರಂಭವಾಗುವ ಮುನ್ನ ನಟ ದರ್ಶನ್ ಅವರನ್ನು ಕೋರ್ಟ್ಗೆ ಭೌತಿಕವಾಗಿ ಹಾಜರುಪಡಿಸಬೇಕು ಹಾಗೂ ಅವರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ದರ್ಶನ್ ಪರ ವಕೀಲ ಅಷ್ಮತ್ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಅವರ ಪೀಠವು ವಜಾಗೊಳಿಸಿದೆ.
ಆರೋಪಿಗಳನ್ನು ನೇರವಾಗಿ ಭೌತಿಕವಾಗಿ ಕರೆತರುವ ಬದಲು ವಿಡಿಯೋ ಕಾನ್ಫರೆನ್ಸ್ (VC) ಮೂಲಕವೇ ವಿಚಾರಣೆಗೆ ಹಾಜರುಪಡಿಸುವಂತೆ ಸೂಚಿಸಿರುವ ಕೋರ್ಟ್, ನಿಯಮ 8.3ರ ಅಡಿಯಲ್ಲಿ ದರ್ಶನ್ ಹಾಗೂ ಅವರ ವಕೀಲರು ಖಾಸಗಿಯಾಗಿ ಮತ್ತು ಮುಕ್ತವಾಗಿ ಸಂವಹನ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ನಿರ್ದೇಶಿಸಿದೆ. ಅಲ್ಲದೆ, ಸಾಕ್ಷ್ಯ ವಿಚಾರಣೆಯ ಮೊದಲು, ನಡುವೆ ಹಾಗೂ ಪ್ರಕ್ರಿಯೆ ಮುಗಿದ ಬಳಿಕವೂ ವಕೀಲರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.
ವೀಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ಕಂಡುಬರುತ್ತಿರುವ ತಾಂತ್ರಿಕ ತೊಂದರೆಗಳನ್ನು ತಕ್ಷಣ ಸರಿಪಡಿಸುವಂತೆ ತಾಂತ್ರಿಕ ವಿಭಾಗಕ್ಕೆ ಸೂಚಿಸಿದ್ದು, ಭೌತಿಕ ಹಾಜರಾತಿಯ ನಿರೀಕ್ಷೆಯಲ್ಲಿದ್ದ ದರ್ಶನ್ ಅವರಿಗೆ ಈ ಆದೇಶ ಹಿನ್ನಡೆಯುಂಟುಮಾಡಿದೆ. ಇದೇ ವೇಳೆ, ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ರಾಜಸಾಕ್ಷಿಯಾಗಲು ಒಪ್ಪಿಕೊಂಡಿರುವ ಪ್ರಕ್ರಿಯೆಯ ವಿಚಾರಣೆಯೂ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ.


