Thursday, August 6, 2026
Homeಕರಾವಳಿಮಂಗಳೂರುಮಂಗಳೂರು: ನನಸಾಗುತ್ತಿದೆ ಕರಾವಳಿಗರ ಬಹು ದಿನಗಳ ಕನಸು;  ಆಗಸ್ಟ್ 11 ರಿಂದ ಬೆಂಗಳೂರು-ಮಂಗಳೂರು ನಡುವೆ ವಂದೇ...

ಮಂಗಳೂರು: ನನಸಾಗುತ್ತಿದೆ ಕರಾವಳಿಗರ ಬಹು ದಿನಗಳ ಕನಸು;  ಆಗಸ್ಟ್ 11 ರಿಂದ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ!

- Advertisement -
- Advertisement -

ಮಂಗಳೂರು: ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಆಗಸ್ಟ್ 11 ರಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.


ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜೂನ್ ತಿಂಗಳೊಳಗಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಡಿದಾದ ಘಾಟ್ ಪ್ರದೇಶದಲ್ಲಿ ಕಡಿದಾದ ಇಳಿಜಾರು ಇರುವುದರಿಂದ, ಸಾಮಾನ್ಯ ರೈಲುಗಳಿಗೆ ಬ್ಯಾಂಕರ್ ಇಂಜಿನ್‌ಗಳನ್ನು ಜೋಡಿಸಬೇಕಿತ್ತು. ಆದರೆ ವಂದೇ ಭಾರತ್ ರೈಲಿನ ಸ್ವಯಂಚಾಲಿತ ವೇಗ ನಿಯಂತ್ರಣಕ್ಕಾಗಿ ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ತಂತ್ರಜ್ಞಾನ ಹೊಂದಿರುವ 20 ಕೋಚ್‌ಗಳ ವಂದೇ ಭಾರತ್ ರೇಕ್ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ (ICF) ಆಗಮಿಸಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರ ನಿಲ್ದಾಣದಲ್ಲಿದೆ.

ಆಗಸ್ಟ್ 11ರಿಂದ 20ರವರೆಗೆ ಭಾರತೀಯ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆಯ (RDSO) ಉನ್ನತ ಅಧಿಕಾರಿಗಳ ತಂಡವು ಈ ಸಕಲೇಶಪುರ ಘಾಟ್ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರದ ಉಸ್ತುವಾರಿ ವಹಿಸಲಿದೆ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದ್ದಾರೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ಈ ಹೈಸ್ಪೀಡ್ ರೈಲಿನ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಮುದ್ರೆ ಬೀಳಲಿದೆ.

- Advertisement -

Latest News

error: Content is protected !!