
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 10ನೇ ತಿರುವಿನ ಸಮೀಪ ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಸುಮಾರು ಒಂದೂವರೆ ತಾಸು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ವ್ಯತ್ಯಯಗೊಂಡಿತು.
ಘಾಟಿ ಪ್ರದೇಶದಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆ, ದಟ್ಟವಾಗಿ ಕವಿದಿದ್ದ ಮಂಜು ಹಾಗೂ ಬೆಳಕಿನ ಅಭಾವದಿಂದಾಗಿ ತಕ್ಷಣವೇ ಮರವನ್ನು ತೆರವುಗೊಳಿಸಲು ಸಾಧ್ಯವಾಗದೆ ರಸ್ತೆಯ ಇಕ್ಕೆಲಗಳಲ್ಲೂ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ತದನಂತರ ಉಪವಲಯ ಅರಣ್ಯಾಧಿಕಾರಿ ರಂಜಿತ್ ಮತ್ತು ಅವರ ಸಿಬ್ಬಂದಿಗಳಾದ ಗೋಪಾಲ, ಮನೋಹರ್, ಇಸ್ಮಾಯಿಲ್ ಅವರು ಸ್ಥಳೀಯ ವಾಹನ ಸವಾರರೊಂದಿಗೆ ಸೇರಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದರು. ಇದೇ ಸೋಮವಾರ ಬೆಳಗಿನ ಜಾವವೂ 2ನೇ ತಿರುವಿನ ಬಳಿ ಮರವೊಂದು ರಸ್ತೆಗೆ ಬಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.
ಸದ್ಯ ಚಾರ್ಮಾಡಿ ಘಾಟಿ ರಸ್ತೆಯುದ್ದಕ್ಕೂ ನೂರಾರು ಅಪಾಯಕಾರಿ ಮರಗಳಿದ್ದು, ಪ್ರತಿ ಬಾರಿ ಮಳೆ ಸುರಿದಾಗಲೂ ಇವು ರಸ್ತೆಗೆ ಉರುಳಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಸವಾರರಲ್ಲಿ ಆತಂಕ ಮೂಡಿಸಿದೆ.


