ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಶಾಸಕರಿಂದ ಪಕ್ಷಕ್ಕೆ ದ್ರೋಹ ಮತ್ತು ವಂಚನೆಯಾಗಿರುವುದು ನಿಜವಾಗಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚುವ ಕೆಲಸ ಪ್ರಗತಿಯಲ್ಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಬೆಳಗಾವಿಯಲ್ಲಿ ತಿಳಿಸಿದ್ದಾರೆ.
ಅಡ್ಡ ಮತದಾನ ಮಾಡಿದವರು ಮುಂದೆ ಎಂದಿಗೂ ಚುನಾವಣೆಗೆ ನಿಲ್ಲದಂತೆ ಎಚ್ಚರಿಕೆ ನೀಡಿದ ಅವರು, ಈ ಎಲ್ಲಾ ಬೆಳವಣಿಗೆಗಳ ಕುರಿತು ಹೈಕಮಾಂಡ್ಗೆ ವಿವರಣೆ ನೀಡಲು ತಾವು ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶೀಘ್ರದಲ್ಲೇ ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಲಿದ್ದೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷವು ಆಮಿಷಗಳ ಮೂಲಕ ಶಾಸಕರನ್ನು ಸೆಳೆದು “ಕುದುರೆ ವ್ಯಾಪಾರ” ಮತ್ತು “ಆಪರೇಷನ್ ಹಸ್ತ” ನಡೆಸಿದೆ ಎಂದು ಆರೋಪಿಸಿದರು. ಅಲ್ಲದೆ, ಹಿಂದೆ ಬಿಜೆಪಿಯ ಆಪರೇಷನ್ ಕಮಲವನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರು ಈಗ ತಾವೇ ಅದೇ ದಾರಿ ಹಿಡಿದಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ ಅಶೋಕ, ಅಡ್ಡ ಮತದಾನದ ಕುರಿತು ವಿಜಯೇಂದ್ರ ಅವರ ಆಣೆ-ಪ್ರಮಾಣದ ಹೇಳಿಕೆಯ ಬಗ್ಗೆ ನಾಳೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.


