ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಸಾವನ್ನಪ್ಪಿರುವ ಘಟನೆ ಪದವಿನಂಗಡಿಯಲ್ಲಿ ಗುರುವಾರ (ಜೂನ್ 4) ನಡೆದಿದೆ. ಉಳ್ಳಾಲದ ಧರ್ಮನಗರ ನಿವಾಸಿ ಸಂತೋಷ್ ಪೂಜಾರಿ (45) ಮೃತ ದುರ್ದೈವಿ.
ಮೃತ ಸಂತೋಷ್ ಪೂಜಾರಿ ಅವರು ಉಳ್ಳಾಲ ಧರ್ಮನಗರದ ನಿವಾಸಿಯಾಗಿದ್ದು, ತೊಕ್ಕೊಟ್ಟಿನ ಪ್ರಸಿದ್ಧ ‘ಶಕ್ತಿ ಭಾರತ್ ವ್ಯಾಯಾಮ ಶಾಲೆ’ಯ ಸಕ್ರಿಯ ಸದಸ್ಯರಾಗಿದ್ದರು. ಪವರ್ ಲಿಫ್ಟಿಂಗ್ನಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇವರು, ಜೀವನೋಪಾಯಕ್ಕಾಗಿ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರು. ಗುರುವಾರ ಪದವಿನಂಗಡಿಯ ಹೊಸ ಕಟ್ಟಡವೊಂದರ 4 ನೇ ಮಹಡಿಯಲ್ಲಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದಾಗ ಇದ್ದಕ್ಕಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ನಾಲ್ಕನೇ ಮಹಡಿಯಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದರಿಂದ ಸಂತೋಷ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತ ಸಂತೋಷ್ ಪೂಜಾರಿ ಅವರು ಈ ಹಿಂದೆ ಗಲ್ಫ್ ದೇಶದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಊರಿಗೆ ಮರಳಿದ್ದ ಅವರು ಉಳ್ಳಾಲ ಬೈಲ್ನಲ್ಲಿ ಸ್ವಂತ ವೆಲ್ಡಿಂಗ್ ಶಾಪ್ ತೆರೆದು ಜೀವನ ನಡೆಸುತ್ತಿದ್ದರು. ಸಂತೋಷ್ ಅವರಿಗೆ ವಿವಾಹವಾಗಿದ್ದು, ಅವರ ಪತ್ನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.


