ಬೆಳ್ತಂಗಡಿ; ಹೆಡ್ ಕಾನ್ಸ್ಟೇಬಲ್ ಮನೆಗೇ ಖದೀಮರು ಕನ್ನ ಹಾಕಿದ ಖದೀಮರು; 15 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಗಾಡಕೋಡಿ ಎಂಬಲ್ಲಿ ಮೇ 15ರ ಶುಕ್ರವಾರ ಬೆಳಗ್ಗೆ ನಡೆದಿದೆ.
ಹಾಸನ ಜಿಲ್ಲೆಯ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಗುಪ್ತವಾರ್ತೆ ಸಂಗ್ರಹ (Intelligence) ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕರುಣಾಕರ ಗೌಡ ಪದ್ಮುಂಜ ಅವರ ಮನೆಯಲ್ಲೇ ಕಳ್ಳತನವಾಗಿದೆ. ಪದ್ಮುಂಜದ ಗಾಡಕೋಡಿಯಲ್ಲಿರುವ ತಮ್ಮ ಮೂಲ ಮನೆಯಲ್ಲಿ ಸದ್ಯ ಒಂಟಿಯಾಗಿದ್ದರು. ಅವರ ಪತ್ನಿ ಉದ್ಯೋಗದ ನಿಮಿತ್ತ ಬೇರೆ ಊರಿನಲ್ಲಿದ್ದು, ಮಕ್ಕಳು ಕೂಡ ಪತ್ನಿಯ ಜೊತೆಯಲ್ಲೇ ವಾಸವಾಗಿದ್ದಾರೆ .
ಕೆಲ ದಿನಗಳ ಹಿಂದೆ ಕರುಣಾಕರ ಗೌಡ ಅವರ ಪತ್ನಿ ತನ್ನ ಕೊಠಡಿಯ ಕಪಾಟಿನಲ್ಲಿ ಚಿನ್ನಾಭರಣಗಳನ್ನು ಸುರಕ್ಷಿತವಾಗಿರಿಸಿ, ಅದಕ್ಕೆ ಬೀಗ ಹಾಕಿ ಬೀಗದ ಕೀಯನ್ನು ತಮ್ಮೊಂದಿಗೇ ಕೊಂಡೊಯ್ದಿದ್ದರು. ಗುರುವಾರ ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದ ಕರುಣಾಕರ ಗೌಡ ಅವರು ತಡರಾತ್ರಿಯವರೆಗೆ ಐಪಿಎಲ್ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಿ ಬಳಿಕ ಮಲಗಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಕಳ್ಳರು ತಡರಾತ್ರಿ ಮನೆಗೆ ನುಗ್ಗಿದ್ದಾರೆ. ಕರುಣಾಕರ ಗೌಡ ಅವರು ಗಾಢ ನಿದ್ರೆಯಲ್ಲಿದ್ದ ಸಂದರ್ಭದಲ್ಲೇ ಪತ್ನಿಯ ಕೋಣೆಯ ಬೀಗ ಒಡೆದು ಕಳ್ಳತನ ಎಸಗಿದ್ದಾರೆ.
ಶುಕ್ರವಾರ ಬೆಳಗ್ಗೆ ಕರುಣಾಕರ ಗೌಡ ಅವರು ಎದ್ದಾಗ ಪತ್ನಿಯ ಕೋಣೆಯ ಬೀಗ ಮುರಿದಿರುವುದು ಕಂಡುಬಂದು ಆತಂಕಗೊಂಡಿದ್ದಾರೆ. ತಕ್ಷಣ ಕೊಠಡಿಯ ಒಳಗೆ ಹೋಗಿ ಪರಿಶೀಲಿಸಿದಾಗ ಕಪಾಟಿನ ಬೀಗವನ್ನು ಕೂಡ ಮುರಿದು ಹಾಕಿರುವುದು ಪತ್ತೆಯಾಗಿದೆ. ಕಪಾಟಿನೊಳಗಿದ್ದ ಸುಮಾರು 14 ಲಕ್ಷ ರೂ. ಮೌಲ್ಯದ ಹನ್ನೆರಡುವರೆ ಪವನ್ ತೂಕದ ಚಿನ್ನಾಭರಣಗಳು, 80 ಸಾವಿರ ರೂ. ಮೌಲ್ಯದ ವಜ್ರದ ಆಭರಣ ಹಾಗೂ ಅಂದಾಜು 1 ಲಕ್ಷ ರೂ. ನಗದು ಹಣ ಸೇರಿದಂತೆ ಒಟ್ಟು 15.80 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಮಹತ್ವದ ಸುಳಿವುಗಳನ್ನು ಕಲೆಹಾಕಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ, ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಹಾಗೂ ಠಾಣಾಧಿಕಾರಿ ಕೌಶಿಕ್ ಬಿ.ಸಿ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಮನೆಯಲ್ಲಿ ಅದು ಮನೆಯಲ್ಲಿ ಜನ ಇದ್ದಾಗಲೇ ಈ ರೀತಿ ಕಳ್ಳತನವಾಗಿರುವ ಜನರನ್ನು ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.


