ಕಡಬ: ಮದುವೆ ಸಮಾರಂಭಕ್ಕೆಂದು ಬಂದಿದ್ದ ಸಂಬಂಧಿಕರೇ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ರೆಂಜಳ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರದ ಬದ್ರುದ್ದೀನ್ ಕೋಡಿಂಬಾಳದ ಅಶ್ರಫ್ ಬಂಧಿತರು.
ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ರೆಂಜಳ ನಿವಾಸಿ ಮಹಮ್ಮದ್ ಇಸ್ಮಾಯಿಲ್ (35) ಅವರು ಪತ್ನಿ ಹಾಗೂ ಕುಟುಂಬದವರು ರಾಮಕುಂಜದ ಕೆ.ಕೆ ಕನ್ಸ್ಟ್ರಕ್ಷನ್ ಮಾಲೀಕ ಮಹಮ್ಮದ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಏಪ್ರಿಲ್ 3 ರಂದು ಉಪ್ಪಿನಂಗಡಿಯ ತೆಕ್ಕಾರಿನಲ್ಲಿ ಇಸ್ಮಾಯಿಲ್ ಅವರ ಅತ್ತೆಯ ತಮ್ಮನ ಮಗಳ ಮದುವೆ ಇತ್ತು. ಈ ಸಮಾರಂಭಕ್ಕಾಗಿ ಸಕಲೇಶಪುರದಿಂದ ಪತ್ನಿಯ ಚಿಕ್ಕಮ್ಮ ಮತ್ತು ಅವರ ಮಗ ಬದ್ರುದ್ದೀನ್ ಬಂದಿದ್ದರು. ಮದುವೆ ಮುಗಿಸಿ ಏಪ್ರಿಲ್ 5 ರಂದು ಸಂಜೆ ಬದ್ರುದ್ದೀನ್ ಇಸ್ಮಾಯಿಲ್ ಅವರ ಮನೆಗೆ ಬಂದಿದ್ದನು.
ಏಪ್ರಿಲ್ 6 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಫರ್ಜಾನ್ ಅವರು ಕಪಾಟಿನ ಮೇಲಿದ್ದ ತಮ್ಮ ಹ್ಯಾಂಡ್ ಬ್ಯಾಗ್ ಪರಿಶೀಲಿಸಿದಾಗ, ಅದರಲ್ಲಿಟ್ಟಿದ್ದ ತಲಾ 6 ಗ್ರಾಂ ತೂಕದ 2 ಚಿನ್ನದ ಉಂಗುರಗಳು (ಒಟ್ಟು 12 ಗ್ರಾಂ) ಮತ್ತು 1000 ರೂಪಾಯಿ ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿ ಬ್ಯಾಗ್ ಪರಿಶೀಲನೆ ನಡೆಸುತ್ತಿರುವುದನ್ನು ಕಂಡ ಬದ್ರುದ್ದೀನ್ ತಕ್ಷಣವೇ ಮನೆಯಿಂದ ಹೊರಟು ಹೋಗಿದ್ದಾನೆ. ನಂತರ ಆತ ಅಶ್ರಫ್ ಎಂಬಾತನೊಂದಿಗೆ ಧರ್ಮಸ್ಥಳಕ್ಕೆ ತೆರಳಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬದ್ರುದ್ದೀನ್ ಮತ್ತು ಅಶ್ರಫ್ ಸೇರಿ ಚಿನ್ನ ಹಾಗೂ ಹಣವನ್ನು ಕಳವು ಮಾಡಿರಬಹುದು ಎಂದು ಇಸ್ಮಾಯಿಲ್ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಕಳವಾದ ಸೊತ್ತಿನ ಒಟ್ಟು ಮೌಲ್ಯ ಅಂದಾಜು 91,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305(a) ಮತ್ತು 3(5) ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


