ಮಂಗಳೂರು; ಕರಾವಳಿ ಬೆಡಗಿ, ದರ್ಶನ್ ಅವರ ಕಾಂತ್ರಿ ಸಿನಿಮಾದ ನಟಿ ನಿಮಿಕಾ ರತ್ನಾಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ ಮೂಲದ ಉದ್ಯಮಿ ಆಶಿಶ್ ಅವರನ್ನು ವರಿಸಿದ್ದು ಏಪ್ರಿಲ್ 06 ರಂದು ಮಂಗಳೂರಿನಲ್ಲಿ ಇವರ ವಿವಾಹ ಮಹೋತ್ಸವ ಅತ್ಯಂತ ವೈಭವದಿಂದ ನೆರವೇರಿತು.
ಮೂಲತಃ ಮಂಗಳೂರಿನವರೇ ಆದ ನಿಮಿಕಾ, ತಮ್ಮ ಹುಟ್ಟೂರಿನಲ್ಲಿಯೇ ವಿವಾಹವಾಗಲು ಇಚ್ಛಿಸಿದ್ದರು. ಅದರಂತೆ ಸೋಮವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತ ಬಂಧು-ಮಿತ್ರರು ಹಾಗೂ ಗುರು-ಹಿರಿಯರ ಸಮ್ಮುಖದಲ್ಲಿ ಈ ನವಜೋಡಿ ಸಪ್ತಪದಿ ತುಳಿದಿದ್ದಾರೆ. ಮಂಗಳೂರಿನ ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯ ವಿಧಿವಿಧಾನಗಳು ಜರುಗಿದ್ದು, ನಟಿ ನಿಮಿಕಾ ಅವರು ತಮ್ಮ ಮದುವೆಯ ಸಂಭ್ರಮದ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕ್ರಿಕೆಟಿಗ ಪೃಥ್ವಿ ಶಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ನಿಮಿಕಾ ಅವರು ತಮ್ಮ ಕುಟುಂಬದೊಂದಿಗೆ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಭಾವಿ ಪತಿಯೊಂದಿಗೆ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಇದೀಗ ಅಧಿಕೃತವಾಗಿ ವಿವಾಹವಾಗುವ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.
‘ಅಬ್ಬರ’, ‘ಮಿಸ್ಟರ್ ಬ್ಯಾಚುಲರ್’, ‘ಕ್ರಾಂತಿ’ ಹಾಗೂ ‘ಫ್ಲರ್ಟ್’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಿಮಿಕಾ ರತ್ನಾಕರ್, ಸ್ಯಾಂಡಲ್ವುಡ್ನ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ನಿಮಿಕಾ ರತ್ನಾಕರ್ ಮತ್ತು ಆಶಿಶ್ ಅವರ ವಿವಾಹಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.


