ಮಂಗಳೂರು: ಕಂಕನಾಡಿ ನಗರ ಹಾಗೂ ಕಾವೂರು ಠಾಣೆಯ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇರೆಗೆ ಆರು ಮಂದಿ ಯುವಕರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಿರಣ ಪ್ರಸಾದ್ (22), ಸಲ್ಮಾನ್ (18), ಪ್ರಜ್ವಲ್ (23), ಕಾರ್ತಿಕ್ (24), ಪ್ರಜ್ವಲ್ ಅಶ್ವತ್ಥ್ ವೇಗಸ್ (25) ಮತ್ತು ಅನ್ಸಿಲ್ ಗ್ರಿಪ್ಥ್ ಅಲ್ಪ್ರೇಡ್ (24) ಎಂದು ಹೇಳಲಾಗಿದೆ.
ಕಿರಣ ಪ್ರಸಾದ್ ಹಾಗೂ ಮುಹಮ್ಮದ್ ಸಲ್ಮಾನ್ ಅಡ್ಯಾರ್ ಪದವಿನ ಅಂಬೇಡ್ಕರ್ ಭವನದ ಮುಂದಿನ ಮೈದಾನದಲ್ಲಿ ಗಾಂಜಾ ಸೇವನೆ ಮಾಡಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದು ಈ ಸಂದರ್ಭದಲ್ಲಿ ಅವರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಇನ್ನು ಕಾರ್ತಿಕ್ ಮತ್ತು ಪ್ರಜ್ವಲ್ ಮಾದಕ ವಸ್ತು ಸೇವಿಸಿ ಅಡ್ಯಾರ್ ಕಟ್ಟೆ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಡುಶೆಡ್ಡೆ ರೈಲ್ವೆ ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ಪ್ರಜ್ವಲ್ ಅಶ್ವತ್ಥ್ ವೇಗಸ್ ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬೊಂದೇಲ್ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಅನ್ಸಿಲ್ ಗ್ರಿಪ್ಥ್ ಅಲ್ಪ್ರೇಡ್ ಎಂಬಾತನ್ನು ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


