ಬೆಳ್ತಂಗಡಿ; ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯ ಬ್ಯಾಗ್ ಎಗರಿಸಿದ ಕಿರಾತಕನೊಬ್ಬ ಅದರಲ್ಲಿದ್ದ ಹಣವನ್ನೆಲ್ಲಾ ಕಸಿದುಕೊಂಡು ಪರ್ಸನ್ನು ಕಕ್ಕೇನ ಬಳಿ ಎಸೆದು ಹೋದದ್ದನ್ನು ತನಗೆ ಸಿಕ್ಕಿದ ಕೂಡಲೇ ಅದರಲ್ಲಿದ್ದ ದಾಖಲೆ ಆಧರಿಸಿ ಅದನ್ನು ಕಕ್ಕಿಂಜೆಯ ಮಹಿಳೆಗೆ ಮಾ.15 ರಂದು ಹಸ್ತಾಂತರಿಸಿ ಉಜಿರೆಯ ಆಟೋ ಚಾಲಕ ಗಣೇಶ್ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯು.ಬಿ ಅಟೋ ಚಾಲಕ ಮಾಲಕರ ಸಂಘದ ಸದಸ್ಯರೂ ಆಗಿರುವ ರಾಮದರ್ಶನ ಆಟೋ ಚಾಲಕ ಗಣೇಶ್ ಅವರು ಕರ್ತವ್ಯದ ನಿಮಿತ್ತ ತೆರಳುತ್ತಿದ್ದಾಗ ಪರ್ಸ್ ಬಿದ್ದು ಸಿಕ್ಕಿತ್ತು. ಅದರಲ್ಲಿದ್ದ ದಾಖಲೆಗಳ ಆಧಾರದಲ್ಲಿ ಕರೆ ಮಾಡಿ, ಪರ್ಸ್ ಎಗರಿಸಲ್ಪಟ್ಟು ಸಮಸ್ಯೆಗೆ ಸಿಲುಕಿ ಉಜಿರೆಯಲ್ಲಿ ಪರಿತಪಿಸುತ್ತಿದ್ದ ಕಕ್ಕಿಂಜೆಯ ಮಹಿಳೆಯನ್ನು ಸಂಪರ್ಕಿಸಿ ಅವರಿಗೆ ಪರ್ಸ್ ಮರಳಿಸಲಾಯಿತು. ಈ ವೇಳೆ ಮಾತನಾಡಿದ ಮಹಿಳೆ, ನನ್ನ ನಗದು ಕಳವಾಗಿದೆ. ನಾನು ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಕಿರಸತಕನೊಬ್ಬ ನನ್ನ ಪರ್ಸ್ ಕಸಿದುಕೊಂಡಿದ್ದಾನೆ. ಇದನ್ನುನಾನು ಬಸ್ಸು ನಿರ್ವಾಹಕರಲ್ಲಿ ತಿಳಿಸಿದರೂ ಅವರು ಸ್ಪಂದಿಸಲಿಲ್ಲ. ಬಳಿಕ ಉಜಿರೆಯ ಸಂಚಾರ ನಿಯಂತ್ರಕರ ಗಮನಕ್ಕೆ ತರಲಾಯಿತಾದರೂ ಅವರೂ ಸಕಾಲಿಕವಾಗಿ ಸ್ಪಂದಿಸಿಲ್ಲ. ಕಳ್ಳ ಪರ್ಸನ್ನು ಕಕ್ಕೇನ ಬಳಿ ಎಸೆದಿರುವ ಸಾಧ್ಯತೆ ಇದೆ. ಇದೀಗ ಗಣೇಶ್ ಅವರು ಪರ್ಸ್ ತಂದೊಪ್ಪಿಸಿದ್ದಾರೆ. ಅದರಲ್ಲಿ ನನ್ನ ಅಮೂಲ್ಯ ದಾಖಲೆಗಳಿದ್ದು ನನಗೆ ವಾಪಸ್ ಮರಳಿಸಿದ್ದರಿಂದ ಬಹಳ ಸಹಾಯವಾಯಿತು ಎಂದು ತಿಳಿಸಿದ್ದಾರೆ.


