ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು ಹಿಂದೂ ಸಂಗಮ ಸಮಾವೇಶ ಆಯೋಜಿಸಲಾಗಿತ್ತು. ಭಟ್ಕಳದ ಹಳೆ ಬಸ್ ನಿಲ್ದಾಣ ಬಳಿ ನಡೆದ ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ್ದರು.
ದಿಕ್ಸೂಚಿ ಭಾಷಣ ಮಾಡಿದ ಅನಂತ ಕುಮಾರ್ ಹೆಗಡೆ, ಹಿಂದೂಗಳನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಏನೂ ಮಾಡಿಲ್ಲ. ಹಿಂದೂಗಳನ್ನು ಸೋಲಿಸಿದ್ದು ನಮ್ಮ ಹಿಂದೂಗಳೇ. ಶಾಲು ಮತ್ತು ಟೋಪಿ ಹಾಕಿಕೊಂಡು ಹೋಗುವುದು, ಸ್ವಾಮೀಜಿಗಳು ಕಂಡ ತಕ್ಷಣ ಕಾಲಿಗೆ ಬೀಳುವುದು ಹಿಂದುತ್ವ ಅಲ್ಲ ಎಂದು ಹೇಳಿದ್ದಾರೆ.
ಇಲ್ಲಿ ನಾವೂ ಬದುಕಬೇಕು ಮತ್ತು ಬೇರೆಯವರೂ ಬದುಕಬೇಕು ಎಂಬುದೇ ಹಿಂದುತ್ವವಾಗಿದ್ದು, ನಾವು ಗಟ್ಟಿ ಇದ್ದರೇ ಮಾತ್ರ ನಮ್ಮ ಬದುಕಿಗೆ ಇಲ್ಲಿ ಭರವಸೆ ಎಂದು ಭಾಷಣದಲ್ಲಿ ಮಾತನಾಡಿರುವ ಅನಂತಕುಮಾರ್ ಹೆಗಡೆ, ಹಿಂದೂ ಸಂಘಟನೆ ಒಂದು ಶಕ್ತಿ ಅಂತಾ ಯಾರಿಗೂ ಅನ್ನಿಸಿರಲಿಲ್ಲ ಎಂದು ಹೇಳಿದ್ದಾರೆ.
ಎರಡು ವರ್ಷದ ಬಳಿಕ ಸಾರ್ವಜನಿಕ ವೇದಿಕೆಯಲ್ಲಿ ಅನಂತ ಕುಮಾರ್ ಹೆಗಡೆ ಭಾಗವಹಿಸಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಭಟ್ಕಳ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


