ಮೂಡಬಿದಿರೆ; ಬಸ್ ನಿರ್ವಾಹಕರೊಬ್ಬರು ಬಸ್ಸಿನಲ್ಲಿ ಸಿಕ್ಕ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಘಟನೆ ಮೂಡಬಿದರೆಯಲ್ಲಿ ನಡೆದಿದೆ.
ವಿಶಾಲ್ ಮೋಟರ್ಸ್ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್ ರಾಜೇಶ್ ಹೆಗ್ಡೆ ಅವರಿಗೆ ಪ್ರಯಾಣದ ವೇಳೆ ಬಸ್ಸಿನೊಳಗೆ ಚಿನ್ನದ ಸರ ಸಿಕ್ಕಿತ್ತು. ಈ ಬಗ್ಗೆ ಅವರು ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ನಂತರ ಚಿನ್ನದ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಸುಧೀಕ್ಷಾ ಅವರದ್ದು ಎಂಬುದು ಗೊತ್ತಾಗಿದೆ. ಅವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಚಿನ್ನದ ಸರವನ್ನು ಕಳೆದುಕೊಂಡಿದ್ದರು.
ಮಾಹಿತಿಯನ್ನು ತಿಳಿದ ಸುಧೀಕ್ಷಾ ಅವರು ಸೂಕ್ತ ವಿವರಗಳನ್ನು ನೀಡಿದ ಬಳಿಕ ಕಂಡಕ್ಟರ್ ರಾಜೇಶ್ ಹೆಗ್ಡೆ ಅವರಿಂದ ತಮ್ಮ ಚಿನ್ನದ ಸರವನ್ನು ಮರಳಿ ಪಡೆದುಕೊಂಡರು. ಈ ವೇಳೆ ಅವರು ಕಂಡಕ್ಟರ್ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದರು.
ಸುಮಾರು 3 ಲಕ್ಷ ಮೌಲ್ಯದ ಚಿನ್ನವನ್ನು ಲಾಭದಾಸೆ ಇಲ್ಲದೆ ನಿಜವಾದ ಮಾಲೀಕಿಗೆ ಒಪ್ಪಿಸಿದ ರಾಜೇಶ್ ಹೆಗ್ಡೆ ಅವರ ಪ್ರಾಮಾಣಿಕ ನಡೆಗೆ ಬಸ್ ಮಾಲೀಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.


