ಮಡಿಕೇರಿ;ಮನೆಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಮಾಜಿ ಯೋಧ ಸಜೀವ ದಹನವಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ತೋಳುರುಶೆಟ್ಟಳ್ಳಿಲ್ಲಿ ಘಟನೆ ನಡೆದಿದೆ. ಹೆಚ್.ಎ. ವೆಂಕಟೇಶ್ (64) ಮೃತರು.
ಹೆಚ್.ಎ. ವೆಂಕಟೇಶ್ ಅವರು ಮಾಜಿ ಸಿಆರ್ಪಿಎಫ್ ಯೋಧರಾಗಿದ್ದು, ನಿವೃತ್ತಿಯ ನಂತರ ಸ್ವಗ್ರಾಮದಲ್ಲೇ ವಾಸವಾಗಿದ್ದರು. ತೋಟದ ಯಂತ್ರೋಪಕರಣಗಳ ಬಳಕೆಗೆಂದು ಮನೆಯಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್ಗೆ ಏಕಾಏಕಿ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆ ವೇಗವಾಗಿ ವ್ಯಾಪಕವಾಗುತ್ತಿದ್ದಂತೆ ಹೊರಬರಲು ಸಾಧ್ಯವಾಗದೆ ಅವರು ಒಳಗೇ ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮನೆಯಿಂದ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಮನೆ ಬಳಿ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರು. ಆದಾಗ್ಯೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಪ್ರಯತ್ನ ಫಲಕಾರಿಯಾಗಲಿಲ್ಲ. ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ವೆಂಕಟೇಶ್ ಅವರು ಸಜೀವ ದಹನಗೊಂಡಿರುವುದು ದೃಢಪಟ್ಟಿದೆ.
ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ.


