ಬೆಳ್ತಂಗಡಿ : ಬಾಲ್ಯವಿವಾಹ ನಡೆಸಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಯ ನೇತೃತ್ವದಲ್ಲಿ ಫೆ.8 ರಂದು ತಡೆಗಟ್ಟಿದ ಪ್ರಕರಣ ನಡೆದಿದೆ
ಗುರುವಾಯನಕೆರೆ ಮಸೀದಿಯ ವತಿಯಿಂದ ಪ್ರತಿ ವರ್ಷ ಬಡ ಕುಟುಂಬ ವಧು,ವರನನ್ನು ಗುರುತಿಸಿ ಸರಳ ವಾರ್ಷಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಗುರುವಾಯನಕೆರೆ ಮಸೀದಿಯಲ್ಲಿ ಫೆ.8 ರಂದು ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಕಾಲೋನಿಯ ದಂಪತಿ ಅಪ್ರಾಪ್ತ ಪುತ್ರಿಯ ಮದುವೆ ನಡೆಸಲು ತಯಾರಿ ನಡೆಸಿದ್ದರು. ಆದರೆ ಮದುವೆಯಾಗುವ ಹುಡುಗಿಗೆ 18 ವರ್ಷ ಆಗದಿರುವ ಬಗ್ಗೆ ಮಂಗಳೂರು ಮಕ್ಕಳ ರಕ್ಷಣಾ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು.
ತಕ್ಷಣ ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಲು ಮುಂದಾಗಿದ್ದಾರೆ. ಹುಡುಗಿ ಆಧಾರ ಕಾರ್ಡ್ ನಲ್ಲಿ ಜನನ ದಿನಾಂಕ ಜ.17.2008 ಎಂದು ಇದ್ದು ಶಾಲಾ ದಾಖಲೆಯಲ್ಲಿ ಎ.17.2008 ಎಂದು ಇದ್ದು ಮೂರು ತಿಂಗಳ ವ್ಯತ್ಯಾಸ ಹೊಂದಿದೆ ಎಂದು ಅಧಿಕಾರಿಗಳು ಹೇಳಿದಾಗ ಮದುವೆ ಮನೆಯವರು ವಿರೋಧ ವ್ಯಕ್ತಪಡಿಸಿದರು.
ಗೇರುಕಟ್ಟೆ ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಈಶ್ವರಿ ಕೆ.ಅವರನ್ನು ಕರೆಯಿಸಿ ಶಾಲಾ ದಾಖಲೆಯನ್ನು ಪರಿಶೀಲನೆ ನಡೆಸಿದಾಗ, ಬಾಲಕಿಯ ಮದುವೆ ವಯಸ್ಸಿಗೆ ಮೂರು ತಿಂಗಳ ಕಾಲ ಇದೆ ಎಂದು ಸ್ಪಷ್ಟಪಡಿಸಿದರು. ಅಧಿಕಾರಿಗಳು ಮದುವೆ ಮನೆಯವರ ಮನ ಒಲಿಸಿ ಮುಂದಿನ ಮೂರು ತಿಂಗಳ ನಂತರ ಮದುವೆ ಮಾಡಿಸುವಂತೆ ತಿಳಿಸಿ ಬಾಲ್ಯ ವಿವಾಹವನ್ನು ತಡೆಗಟ್ಟಿದರು.
ಮಂಗಳೂರು ಮಕ್ಕಳ ರಕ್ಷಣಾ ಇಲಾಖೆಯ ಡಿ.ಸಿ.ಪಿ.ಒ.ಯಶೋಧ, ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಧರ್ಮಸ್ಥಳ ವಲಯ ಮೇಲ್ವಿಚಾರಕಿ ಅನ್ನಪೂರ್ಣ, ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಕುಂಞ ಕೆ, ಗೇರುಕಟ್ಟೆ ಸರಕಾರಿ ಪ್ರೌಢಶಾಲಾ ಉಪ ಪ್ರಾಂಶುಪಾಲೆ ಈಶ್ವರಿ.ಕೆ, ಬೆಳ್ತಂಗಡಿ ಅರಕ್ಷಕ ಠಾಣೆ ಸಿಬ್ಬಂದಿ ಶ್ವೇತಾ, ಗೇರುಕಟ್ಟೆ ಕಳಿಯ ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ, ಆಶಾ ಕಾರ್ಯಕರ್ತೆ ಸುಭಾಷಿಣಿ ಕೆ. ಹಾಗೂ ಪಂಚಾಯತ್ ಸಿಬ್ಬಂದಿ ಮತ್ತಿತರರಿದ್ದರು.


