ಬೆಳ್ತಂಗಡಿ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದು, ಹಲವು ಯೋಜನೆಗಳ ಮೂಲಕ ಪರಿಶಿಷ್ಟರ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುದಾನವನ್ನು ಮೀಸಲಿಟ್ಟಿದೆ.ನೊಂದವರ ಮೀಸಲಾತಿ, ಭೂಮಿ ರಹಿತರಿಗೆ ನಿವೇಶನ ಕೊಡುವ ಕಾರ್ಯ, ಬಡವರ ಶೋಷಿತರ ಪರವಾದ ಕಾರ್ಯ ಕ್ರಮಗಳೆಲ್ಲವು ಕಾಂಗ್ರೆಸ್ ಸರಕಾರಗಳ ಕೊಡುಗೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಳ್ತಂಗಡಿ ತಾಲೂಕು ಆಡಳಿತ, ತಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕುಕ್ಕೇಡಿ ಡಾ.ಬಿ.ಆರ್.ಅಂಬೇಡ್ಕರ್ ಭವನವದ ನವೀಕೃತ ಕಟ್ಟಡವನ್ನು ಜ.25 ರಂದು ಭಾನುವಾರ ಉದ್ಘಾಟಿಸಿ ಹಾಗೂ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಸಂವಿಧಾನ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಬಲುದೊಡ್ಡ ಕಾಣಿಕೆ ನೀಡಿದ್ದು, ಧ್ವನಿ ಇಲ್ಲದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಅಂಬೇಡ್ಕರ್ ಅವರ ಸೇವೆ ಸ್ಮರಣೀಯವಾಗಿದೆ. ಆದರೆ ಈಗ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು ಪ್ರಗತಿಪರ ಚಿಂತನೆ, ಮೀಸಲಾತಿಯ ಕುರಿತು ಯಾವುದೇ ಯೋಚನೆಯನ್ನು ಮಾಡದೆ ಈಗ ಬರೀ ಅಂಬೇಡ್ಕರ್ ಪೋಟೋ ಇಟ್ಟು ರಾಜಕಾರಣ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರನ್ನು ಸದಾ ವಿರೋಧವನ್ನೇ ಮಾಡುತ್ತಾ ಬಂದಿದ್ದ ಇವರು ಭಾವನಾತ್ಮಕವಾಗಿ ಜನರಿಂದ ಮತ ಪಡೆಯುವ ಕಾರ್ಯ ಮಾಡುತ್ತಿದ್ದಾರೆ.ಸರಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣಗೊಂಡು ಉಪಯೋಗ ಆಗದೇ ಇದ್ದಾಗ ಪ್ರಯೋಜನ ಇಲ್ಲದಂತಾಗುತ್ತದೆ. ಪ್ರಸ್ತುತ ಕುಕ್ಕೇಡಿಯ ಈ ಭವನವು ಒಂದು ಕೋಟಿಗೂ ಹೆಚ್ಚಿನ ಅನುದಾನದಿಂದ ಸುಂದರವಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅನುದಾನ ನೀಡಿದ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಮಾರಂಭದಲ್ಲಿ ಸಚಿವರು ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಪ್ರಸ್ತಾವನೆಗೈದರು.ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಕುಕ್ಕೇಡಿ ಗ್ರಾ.ಪಂ.ಸದಸ್ಯರು,ದ.ಕ.ಜಿ.ಪಂ.ಯೋಜನಾ ನಿರ್ದೇಶಕ ಜಯರಾಮ್ ಇ., ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್, ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಉಪಸ್ಥಿತರಿದ್ದರು.

ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ಜಿಪಂಸದಸ್ಯ ಸಾಹುಲ್ ಹಮೀದ್, ಹಾಗೂ ಇತರ ಮುಖಮಡರುಗಳು ಉಪಸ್ಥಿತರಿದ್ದರು.ಬೆಳ್ತಂಗಡಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿಭವಾನಿಶಂಕರ್ ಸ್ವಾಗತಿಸಿದರು. ಮುಂಡಾಜೆ ನವೋದಯ ಶಾಲೆಯ ಪ್ರಿನ್ಸಿಪಾಲ್ ಮುರಳೀಧರ್ ಕಾರ್ಯಕ್ರಮ ನಿರ್ವಹಿಸಿದರು.
ಹಲವು ಕಾರ್ಯಕ್ರಮಗಳಲ್ಲಿ ಭಾಗಿ: ಬೆಳಿಗ್ಗೆ ಆಗಮಿಸಿದ ಸಚಿವರು ಕಾಶಿಪಟ್ಣ ಗ್ರಾಪಂ ವ್ಯಾಪ್ತಿಯ ಸಮಾರಂಭ, ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಸಭಾಭವನ ಮತ್ತು ಅನ್ನಛತ್ರ ಕಟ್ಟಡಗಳ ಶಿಲಾನ್ಯಾಸ ಸಮಾರಂಭ, ನಡ ಶಾಲೆಯ ಶತ ಸಂಭ್ರಮ, ಅಳದಂಗಡಿ, ಕಾಜೂರು ಉರೂಸ್ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು.


