ಪುತ್ತೂರು; ಪರ್ಪುಂಜದಲ್ಲಿ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.
ಪರ್ಪುಂಜ ಅಬ್ರಾಡ್ ಹಾಲ್ ಬಳಿಯಲ್ಲಿ ಶನಿವಾರ ಅಪಘಾತ ಸಂಭವಿಸಿದೆ. ಬನ್ನೂರು ನಿವಾಸಿ ಹನೀಫ್ ಅವರ ಮಗಳು ಶಾಝ್ವಾ ಫಾತಿಮಾ (4 ವರ್ಷ 6 ತಿಂಗಳು) , ಪುತ್ತೂರು ಬೊಳುವಾರು ಕಾಪಿಕಾಡ್ ನಿವಾಸಿ ಝುಲೈಕಾ ಮೃತರು. ಶಾಝ್ವಾ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಝುಲೈಕಾ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ .
ಇನ್ನು ಈ ಬಗ್ಗೆ ಬನ್ನೂರು ನಿವಾಸಿ ಹನೀಫ್ ಅವರು ನೀಡಿದ ದೂರಿನಲ್ಲಿ, ಸುಮಾರು 4.15ಕ್ಕೆ ತಮ್ಮ ಕುಟುಂಬದವರಾದ ಪತ್ನಿ, ಅತ್ತೆ, ಭಾವನ ಹೆಂಡತಿ ಹಾಗೂ ಮೂವರು ಮಕ್ಕಳೊಂದಿಗೆ ಆಟೋ ರಿಕ್ಷಾದಲ್ಲಿ ಕುಟುಂಬದೊಂದಿಗೆ ಬೊಳುವಾರಿನಿಂದ ಪುತ್ತೂರಿನತ್ತ ಬರುತ್ತಿದ್ದಾಗ ಎದುರುನಿಂದ ಬಂದ ಕಾರು ಚಾಲಕ ತಮಿಳುನಾಡು ಮೂಲದ ಲಕ್ಷ್ಮಿಬದಿರಾಜು ಎಂಬಾತ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ತಪ್ಪು ಬದಿಯಲ್ಲಿ ಕಾರು ಓಡಿಸಿ ರಿಕ್ಷಾಗೆ ಢಿಕ್ಕಿ ಹೊಡೆದಿದ್ದಾರೆ ಎಂದಿದ್ದಾರೆ. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


