ಬಂಟ್ವಾಳ: ಆಟೋ ಚಾಲಕರೊಬ್ಬರು ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞೆ ತಪ್ಪಿದ್ದ ಘಟನೆ ನಡೆದಿದ್ದು, ಪೂಂಜಾಲಕಟ್ಟೆಯ ಜನೌಷಧಿ ಕೇಂದ್ರ ಸಿಬ್ಬಂದಿಯೊಬ್ಬರು ಸಕಾಲದಲ್ಲಿ ಸ್ಪಂದಿಸಿದ ಕಾರದಿಂದಾಗಿ ಅವರ ಜೀವ ಉಳಿದಿದೆ.
ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದ ಸಿಬ್ಬಂದಿ ಸುರೇಖಾ ಅವರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಆಟೋ ಚಾಲಕರೊಬ್ಬರು ತನ್ನ ಅಣ್ಣನಿಗೆ ಔಷಧಿ ಖರೀದಿಸಲು ಪುಂಜಾಲಕಟ್ಟೆಯ ಪ್ರಧಾನಮಂತ್ರಿ ಜನಔಷಧಿ ಕೇಂದ್ರಕ್ಕೆ ಬಂದಿದ್ದು, ಔಷಧಿ ಪಡೆದುಕೊಂಡು ಹಣ ನೀಡುವ ವೇಳೆಗೆ ಚಿಲ್ಲರೆ ಬೇಕೆಂದು ತನ್ನ ಆಟೋ ಬಳಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಸ್ವಸ್ಥಗೊಂಡು ತಲೆ ತಿರುಗಿ ಬಿದ್ದ ಅವರ ತುರ್ತು ಪರಿಸ್ಥಿತಿಯನ್ನು ಗಮನಿಸಿದ ಸುರೇಖಾ ಅವರು ಇತರ ಸಿಬ್ಬಂದಿಯ ಸಹಾಯ ಪಡೆದು ತಕ್ಷಣ ಅವರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ. ನಂತರದಲ್ಲಿ ರಕ್ತದೊತ್ತಡ ಪರೀಕ್ಷಿಸಿದ್ದು, ಬಿ.ಪಿ ತೀರಾ ಕಡಿಮೆಯಾಗಿ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವರು ತಕ್ಷಣವೇ ಅವಶ್ಯಕ ಉಪಚಾರ ನೀಡಿದ್ದಾರೆ.ಅದಾಗಲೇ ಅಟೋ ಚಾಲಕ ಪ್ರಜ್ಞೆ ಕಳೆದುಕೊಂಡಿದ್ದು, ಸುರೇಖಾ ಅವರು ಹೃದಯ ಸಿಪಿಆರ್ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿದ ಪರಿಣಾಮ ಆಟೋ ಚಾಲಕನಿಗೆ ಪ್ರಜ್ಞೆ ಮರಳಿ ಬಂದಿದೆ. ನಂತರ ಅವರನ್ನು ತಜ್ಞ ವೈದ್ಯರ ಬಳಿಗೆ ತಪಾಸಣೆಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಜನ ಔಷಧಿ ಕೇಂದ್ರದ ಸಿಬ್ಬಂದಿ ಸುರೇಖಾರವರ ಸಮಯೋಚಿತವಾದ ಈ ಕಾರ್ಯಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.


