ಮಂಗಳೂರು: ಬೇಕರಿ ಮುಂಭಾಗ ನಿಲ್ಲಿಸಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ನಿಲ್ಲಿಸಲು ಹೇಳಿದ್ದಕ್ಕೆ ಚಾಲಕ ಇತರೆ ರಿಕ್ಷಾ ಚಾಲಕರ ಜೊತೆ ಸೇರಿ ಬೇಕರಿಗೆ ನುಗ್ಗಿ ಮಾಲೀಕ ಹಾಗೂ ಅವರ ತಾಯಿಗೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ತೊಕ್ಕೊಟ್ಟು ಜಂಕ್ಷನ್ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾರುತಿ ಸ್ವೀಟ್ಸ್ ಮಾಲೀಕರಾದ ಅಶ್ವಿನ್ ಕುಮಾರ್ ತಮ್ಮ ಬೇಕರಿ ಮುಂದೆ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸುವಂತೆ ಚಾಲಕ ಬಶೀರ್ನಲ್ಲಿ ಹೇಳಿದ್ದಾರೆ. ಇದಕ್ಕೆ ಚಾಲಕ ಬಶೀರ್ ಕೋಪಗೊಂಡು ತನ್ನ ಸಹಚರ ರಿಕ್ಷಾ ಚಾಲಕನಾದ ಇಶಾನ್ ನೊಂದಿಗೆ ಬೇಕರಿಗೆ ಬಂದು ಮಾಲೀಕ ಅಶ್ವಿನ್ ಅವರಿಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ.
ಈ ವೇಳೆ ಬೇಕರಿಯಲ್ಲಿದ್ದ ಅಶ್ವಿನ್ ಅವರ ತಾಯಿ ಮತ್ತು ಸಿಬ್ಬಂದಿ ಯುವತಿ ರಿಕ್ಷಾ ಚಾಲಕರನ್ನು ತಡೆದಿದ್ದು, ತಳ್ಳಿದ್ದಾರೆ. ಘಟನೆಯ ದೃಶ್ಯವು ಬೇಕರಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬೇಕರಿ ಮಾಲೀಕ ಅಶ್ವಿನ್ ಅವರು ತನ್ನ ಮತ್ತು ತಾಯಿ ಮೇಲೆ ಹಲ್ಲೆಗೆ ಯತ್ನ ಮಾಡಿ ಜೀವ ಬೆದರಿಕೆ ನೀಡಿರುವ ರಿಕ್ಷಾ ಚಾಲಕರಾದ ಬಶೀರ್ ಮತ್ತು ಇಷಾನ್ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಕಾರ್ಯ ನಡೆಯುತ್ತಿದೆ.


