ಉತ್ತರ ಪ್ರದೇಶ: ಇಲ್ಲಿನ ಮಥುರಾ ಮೂಲದ ವ್ಯಕ್ತಿಯೋರ್ವ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಕಾರಣದಿಂದಾಗಿ, ಯೂಟ್ಯೂಬ್ ನೋಡಿಕೊಂಡು ತನಗೆ ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಹೋಗಿ ಆಸ್ಪತ್ರೆಗೆ ದಾಖಲಾಗಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ತನಗೆ ತಾನೇ ಶಸ್ತ್ರಚಿಕಿತ್ಸೆ ಮಾಡಲು ಹೋಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯನ್ನು ಮಥುರಾ ನಿವಾಸಿಯಾಗಿರುವ ರಾಜಾ ಬಾಬು(32) ಎನ್ನಲಾಗಿದೆ.
ಘಟನೆಯ ವಿವರ: ರಾಜಾ ಬಾಬು ಎನ್ನುವ ವ್ಯಕ್ತಿ ಕಳೆದ ಕೆಲ ದಿನಗಳಿಂದ ತೀವ್ರತರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ನಗರದ ಹಲವು ದೊಡ್ಡ ದೊಡ್ಡ ವೈದ್ಯರ ಬಳಿ ಹೋಗಿ ಪರೀಕ್ಷಿಸಿ ಔಷಧಿ ತಂದರೂ ಹೊಟ್ಟೆನೋವು ಮಾತ್ರ ಕಡಿಮೆಯಾಗಲಿಲ್ಲ. ಆಗಾಗಿ ಈ ಘಟನೆಯಿಂದ ನೊಂದ ರಾಜಾ ಬಾಬು ಅವರು ಬೇರೆ ದಾರಿ ಕಾಣದೇ ತನ್ನ ಹೊಟ್ಟೆ ನೋವಿಗೆ ತಾನೇ ಪರಿಹಾರ ಕಂಡುಕೊಳ್ಳಲು youtube ನಲ್ಲಿ ಹೊಟ್ಟೆ ನೋವಿಗೆ ಸಂಬಂಧಿಸಿದ ಹಲವಾರು ವಿಡಿಯೋ ಗಳನ್ನು ನೋಡಿದ್ದಾರೆ. ಅಷ್ಟೇ ಅಲ್ಲದೆ ಯಾವ ಭಾಗದಲ್ಲಿ ತನಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎನ್ನುವುದನ್ನು ಅರಿತು, ಶಸ್ತ್ರಚಿಕಿತ್ಸೆ ಮಾಡಲು ಮಥುರಾಗೆ ತೆರಳಿ ಶಸ್ತ್ರಚಿಕಿತ್ಸೆಗೆ ಬೇಕಾದ ಸರ್ಜಿಕಲ್ ಬ್ಲೇಡ್, ಹೊಲಿಗೆ ಸಾಮಗ್ರಿಗಳು ಮತ್ತು ಅರಿವಳಿಕೆ ಚುಚ್ಚುಮದ್ದನ್ನು ಖರೀದಿಸಿದ್ದಾರೆ.
ನಂತರದಲ್ಲಿ ಮಾ. 19 ಬುಧವಾರದಂದು ಬೆಳಿಗ್ಗೆ ತನ್ನ ಮನೆಯ ಕೋಣೆಯೊಳಗೆ ಶಸ್ತ್ರಚಿಕಿತ್ಸೆ ಮಾಡಲು ಶುರುಮಾಡಿದ್ದು, ಶಸ್ತ್ರಚಿಕಿತ್ಸೆ ನಡೆಸಬೇಕಾದ ಜಾಗಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ, ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾನೆ. ಆದರೆ ಇದಾದ ಕೆಲ ಕ್ಷಣದ ಬಳಿಕ ಅರಿವಳಿಕೆ ಚುಚ್ಚು ಮದ್ದಿನ ಪ್ರಭಾವ ಕಡಿಮೆಯಾಗುತ್ತಿದ್ದಂತೆ ರಾಜಾ ಬಾಬು ಅವರಿಗೆ ವಿಪರೀತ ನೋವು ಕಾಣಿಸಿಕೊಂಡಿದೆ. ನೋವು ತಡೆಯಲಾಗದೆ ಬೊಬ್ಬೆ ಹೊಡೆಯಲು ಶುರು ಮಾಡಿದ್ದು, ಈತನ ಬೊಬ್ಬೆಗೆ ಮನೆಮಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ಬೆಚ್ಚಿ ಬಿದ್ದ ಮನೆಮಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದಾರೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿದ ವೈದ್ಯರು ರಾಜಾ ಬಾಬು ಆರೋಗ್ಯ್ ಸುಧಾರಿಸುತ್ತಿದೆ ಸ್ವಲ್ಪ ತಡವಾಗುತ್ತಿದ್ದರೂ ಜೀವಕ್ಕೆ ಪಾಯವಿತ್ತು ಎಂದು ತಿಳಿಸಿದ್ದಾರೆ.


