ಬಂಟ್ವಾಳ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಿಕ್ಕ ಶಿಕ್ಷಣದಿಂದ ನಾನು ಇಷ್ಟು ಎತ್ತರದ ಸ್ಥಾನಕ್ಕೆ ಏರಲು ಸಾಧ್ಯವಾಯಿತು ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್.ಕೆ.ಮಾಣಿ ಹೇಳಿದರು.
ವಿದ್ಯಾಭಿವರ್ಧಕ ಸಂಘ, ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ, ಮಾಣಿ ಇವರ ಸಹಯೋಗದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉದ್ದೇಶಿತ ಗುರಿಯನ್ನು ಇಟ್ಟುಕೊಂಡು ಹೆಜ್ಜೆಯನ್ನಿಡಬೇಕು. ಮನೆಯಲ್ಲಿ ಹೆತ್ತವರನ್ನು, ಶಾಲೆಯಲ್ಲಿ ಗುರುಗಳನ್ನು ಗೌರವದಿಂದ ಕಾಣಬೇಕು. ಅವರನ್ನು ಯಾವತ್ತೂ ಮರೆಯಬಾರದು. ನಾವು ದೇವಸ್ಥಾನಕ್ಕೆ ಹೋಗುವಾಗ ಎಷ್ಟು ಭಕ್ತಿಯಿಂದ ಹೋಗುತ್ತೇವೆಯೋ, ಅದೇ ಭಕ್ತಿ ವಿದ್ಯಾಸಂಸ್ಥೆಯ ಮೇಲೆ ಕೂಡಾ ಇರಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆಯವರು, ಬದ್ರುದ್ದೀನ್ ರವರಿಗೆ ಸಿಕ್ಕಿದ ಸ್ಥಾನ ಕೇವಲ ಅವರಿಗೆ ಸಿಕ್ಕಿ ಗೌರವವಲ್ಲ. ಅದು ನಮ್ಮ ಶಾಲೆಗೆ ಮತ್ತು ಊರಿಗೆ ಸಿಕ್ಕಿದ ಗೌರವ. ಇದರಿಂದ ನಾವೆಲ್ಲರೂ ಸಂತಸಪಟ್ಟಿದ್ದೇವೆ. ತಮಗೆ ನಮ್ಮ ಸಂಸ್ಥೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು. ಸಂಸ್ಥೆಯ ವತಿಯಿಂದ ಬದ್ರುದ್ದೀನ್.ಕೆ.ಮಾಣಿಯವರನ್ನು ಗೌರವಾದರಗಳಿಂದ ಸನ್ಮಾನಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಇಬ್ರಾಹಿಂ.ಕೆ.ಮಾಣಿ, ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಕುಶಲ.ಯಂ.ಪೆರಾಜೆ, ಸದಸ್ಯರಾದ ಜಯರಾಮ ರೈ ಕರಿಂಕ, ಸನತ್ ಕುಮಾರ್ ಜೈನ್, ವನಿತಾ ಲಕ್ಷ್ಮೀನಾರಾಯಣ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮೆಲ್ವಿನ್ ಕಿಶೋರ್ ಮಾರ್ಟೀಸ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಾರಿಕ ಉಪಸ್ಥಿತರಿದ್ದರು.
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜಡ್ತಿಲ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ರೈ ತುಂಗೆರೆಕೋಡಿ, ಬಿ.ಎಸ್.ಎನ್.ಎಲ್ ನಿವೃತ್ತ ಅಧಿಕಾರಿ ಜನಾರ್ದನ ಪೂಜಾರಿ, ನಿವೃತ್ತ ಪ್ರಾಂಶುಪಾಲೆ ಪ್ರೇಮಲತ ರೈ, ಶಾಲೆಯ ಅಧ್ಯಾಪಕ- ಅಧ್ಯಾಪಕಿಯರು, ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.
ಆಡಳಿತ ಮಂಡಳಿಯ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಂಗಾಧರ ಆಳ್ವ ಅನಂತಾಡಿ ಅಭಿನಂದನಾ ಮಾತುಗಳನ್ನಾಡಿದರು. ಶಿಕ್ಷಕಿ ಶ್ಯಾಮಲ ಸನ್ಮಾನ ಪತ್ರ ವಾಚಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚೆನ್ನಪ್ಪ ಗೌಡ ವಂದಿಸಿದರು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಜೀವಿತಾ ಮತ್ತು ಸವಿತಾ ಕಾರ್ಯಕ್ರಮ ನಿರೂಪಿಸಿದರು.