ಕಾಪು: ಇಲ್ಲಿನ ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್ ಅವರು ಪ್ರವಾಸಕ್ಕೆಂದು ವಿದೇಶಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ಅವರ ಮನೆಯಿಂದ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಸಹಿತ ಬೆಲೆಬಾಳುವ ಸೊತ್ತುಗಳನ್ನು ಕಳವುಗೈಯಲಾಗಿದೆ. ಈ ಘಟನೆಯು ಗುರುವಾರ ಬೆಳಕಿಗೆ ಬಂದಿದೆ.
ಎರಡು ತಿಂಗಳ ಹಿಂದೆ ಕಾಪು ಪಡು ಗ್ರಾಮ ನಿವಾಸಿ ಕೆ.ಎಚ್. ಉಸ್ಮಾನ್ ಅವರು ತನ್ನ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ದುಬಾೖಗೆ ಪ್ರವಾಸಕ್ಕೆಂದು ತೆರಳಿದ್ದರು. ಈ ಕಳ್ಳತನ ಪ್ರಕರಣವು ಅವರ ಸಹೋದರ ಮನೆ ಬಳಿ ಹೋದಾಗ ಗಮನಕ್ಕೆ ಬಂದಿದೆ.
ಜ. 22ರಿಂದ ಜ. 23ರ ನಡುವಿನ ಅಂತರದಲ್ಲಿ ಉಸ್ಮಾನ್ ಅವರ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 12 ಗ್ರಾಂ ತೂಕದ ಕಿವಿಯ ಚಿನ್ನದ ಬೆಂಡೋಲೆ – 2, ಚಿನ್ನದ ಪೆಂಡೆಂಟ್, ವಿದೇಶಿ ಕೈಗಡಿಯಾರ – 2, ವಿದೇಶಿ ಪರ್ಫ್ಯೂಮ್ – 4 ಸಹಿತ ಅಂದಾಜು 95 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದಾರೆ. ಸ್ಮಾನ್ ಸಹೋದರ ಕೆ.ಎಚ್. ಅಬೂಬೂಕ್ಕರ್ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


