ಉಡುಪಿ: ನ.14ರಿಂದ 20ರ ವರೆಗೆ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ.
ಈ ಕುರಿತಂತೆ ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾಗೋಷ್ಠಿಯಲ್ಲಿ, ಜಿಲ್ಲೆಯಾದ್ಯಂತ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ಧ್ಯೇಯ ವಾಕ್ಯದೊಂದಿಗೆ 71ನೇ ಅ. ಭಾ. ಸಹಕಾರ ಸಪ್ತಾಹ ನಡೆಯಲಿದೆ. ನ.14ರಂದು ಸಹಕಾರ ಸಪ್ತಾಹದ ಉದ್ಘಾಟನೆಯು ಮಂದಾರ್ತಿ ಶ್ರೀ ದುರ್ಗಾ ಸಹಕಾರ ಸೌಧದ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ,’ ಎಂದು ಹೇಳಿದರು.
ಕಾರ್ಯಕ್ರಮಗಳ ವಿವರ:
ನ.15ರಂದು ಕಾರ್ಕಳ ಜೋಡುರಸ್ತೆ ಯಲ್ಲಿರುವ ರಾಜಾಪುರ ಸಭಾ ಭವನದಲ್ಲಿ “ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ನ.16ರಂದು “ಉದ್ಯಮ ಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ರಾಜ್ಯಮಟ್ಟದ ಕಾರ್ಯಕ್ರಮ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಬೆಳಗ್ಗೆ 9ರಿಂದ ನಡೆಯಲಿದೆ. ಸಹಕಾರ ಜಾಥಾದಲ್ಲಿ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರದ 30 ಸಹಕಾರಿ ಟ್ಯಾಬ್ಲೋಗಳು ಪಾಲ್ಗೊಳ್ಳಲಿವೆ.
ನ.17ರಂದು ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ಬೆಳಗ್ಗೆ 10.30ಕ್ಕೆ “ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಪ್ರತಿಭಾ ಪುರಸ್ಕಾರ, ಸಮ್ಮಾನ, ಗೌರವಧನ ವಿತರಣೆ ನಡೆಯಲಿದೆ. ಬೆಳಗ್ಗೆ 9ರಿಂದ ಜಾನಪದ ಸಂಗೀತ ವೈಭವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನ.18ರಂದು ಬೆಳಗ್ಗೆ 10ಕ್ಕೆ ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಸಹ ಕಾರ ಸೌರಭ ಸಭಾಂಗಣದಲ್ಲಿ “ಸಹ ಕಾರ ಸಂಸ್ಥೆಗಳ ನಡುವೆ ಸಹಕಾರ ವನ್ನು ಬಲಪಡಿಸುವುದು’ ಕಾರ್ಯಕ್ರಮ ನಡೆಯಲಿದೆ.
ನ.19ರಂದು ಬೆಳಗ್ಗೆ 10.30ಕ್ಕೆ ಬೆಳ್ವೆಯ ವಾಸುಕೀ ಸಭಾಭವನದಲ್ಲಿ “ಮಹಿಳೆ ಯರು, ಯುವಕರು ಮತ್ತು ಅಬಲ ವರ್ಗಗಳಿಗಾಗಿ ಸಹಕಾರ ಸಂಸ್ಥೆಗಳು’ ಕಾರ್ಯಕ್ರಮ ನಡೆಯಲಿದೆ.
ನ. 20 ರಂದು ಅಜ್ಜರಕಾಡು ಕ್ರೀಡಾಂಗಣದಲ್ಲಿ ಬೆಳಗ್ಗೆ 10ಕ್ಕೆ ‘ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸಪ್ತಾಹದ ಸಮಾರೋಪ’ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಹರೀಶ್ ಕಿಣಿ, ಶ್ರೀಧರ ಪಿ.ಎಸ್., ಸಿಇಒ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.