ಮಂಗಳೂರು; ಪತ್ನಿ ಹಾಗೂ ಮಗುವನ್ನು ಕೊಲೆಗೈದು ಕಾರ್ತಿಕ್ ಭಟ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ (61) ಮತ್ತು ಸಹೋದರಿ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್ (36) ಬಂಧಿತರು. ಮೂಲ್ಕಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಾರ್ತಿಕ್ ಪತ್ನಿ ಮೃತ ಪ್ರಿಯಾಂಕಾ ಹೆತ್ತವರು ಈ ಸಾವಿಗೆ ಕಾರ್ತಿಕ್ ಭಟ್ ಹೆತ್ತವರು ಮತ್ತು ಸಹೋದರಿ ಕಾರಣ ಎಂದು ಆರೋಪಿಸಿದ್ದರು. ಬಳಿಕ ಮೂಲ್ಕಿ ಠಾಣೆಗೆ ದೂರನ್ನೂ ನೀಡಿದ್ದರು. ಆದರೆ ಕಾರ್ತಿಕ್ ಭಟ್ ಕುಟುಂಬಿಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಪೊಲೀಸರು ಕಾರ್ತಿಕ್ ಭಟ್ ಕುಟುಂಬದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ ಪ್ರಿಯಾಂಕಾ ಅವರ ತಾಯಿ ಸಾವಿತ್ರಿ ನೀಡಿದ ದೂರಿಗೆ ಸ್ಪಂದಿಸಿದ ಮೂಲ್ಕಿ ಠಾಣೆ ಪೊಲೀಸರು ಅವರನ್ನು ಸೋಮವಾರ ಬಂಧಿಸಿ ಮೂಡಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರ ವಿರುದ್ಧ 308 ‘ಭಾರತೀಯ’ ನ್ಯಾಯಸಂಹಿತ ಪ್ರಕಾರ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ.