ಕಿನ್ನಿಗೋಳಿ: ಪಕ್ಷಿಕೆರೆಯ ಕಾರ್ತಿಕ್ ಭಟ್ ಕುಟುಂಬದ ಅಂತ್ಯಕ್ಕೆ ಹಣಕಾಸಿನ ವಿಚಾರ ಮತ್ತು ಶೋಕಿ ಜೀವನವೇ ಕಾರಣವಾಯಿತೇ ಎಂಬ ಸಂಶಯ ಬಲಗೊಳ್ಳುತ್ತಿದೆ.
ಇದಕ್ಕೆ ಮುಖ್ಯ ಕಾರಣ ಕಾರ್ತಿಕ್ ಭಟ್(32) ಕೆಲಸವಿಲ್ಲದಿದ್ದರೂ ಕೂಡ ಗೆಳೆಯರಲ್ಲಿ ಸಾಲ ಮಾಡಿ ಕೆಲಸಕ್ಕೂ ಹೋಗದೆ ಜೀವನ ಮಾಡುತ್ತಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ಸಮಸ್ಯೆಯಿಂದ ಮೇಲೆ ಬರಲಾರದೆ ಪತ್ನಿ ಪ್ರಿಯಾಂಕಾ (28) ಮತ್ತು ಪುಟ್ಟ ಮಗ ಹೃದಯ್ (4) ನನ್ನು ನಿರ್ದಯವಾಗಿ ಕೊಲೆ ಮಾಡಿ ಬಳಿಕ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತೆ ಇಡೀ ಪ್ರಕರಣ ಭಾಸವಾಗುತ್ತಿದೆ.
ಇನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೂವರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿ ನೇರವಾಗಿ ಕೆರೆಕಾಡಿನ ರುದ್ರಭೂಮಿಗೆ ಮೃತದೇಹಗಳನ್ನು ಕೊಂಡೊಯ್ದು ಜತೆಯಾಗಿ ಅಂತ್ಯಕ್ರಿಯೆ ನಡೆಸಲಾಯಿತು. ಕಾರ್ತಿಕ್ ಮೊದಲೇ ಅಂತ್ಯಕ್ರಿಯೆಯನ್ನು ಪತ್ನಿಯ ಮನೆಯವರು ನಡೆಸಲಿ ಎಂದು ಡೈರಿಯಲ್ಲಿ ಬರೆದಿದ್ದು, ಈ ನಿಟ್ಟಿನಲ್ಲಿ ರವಿವಾರ ಎರಡೂ ಕುಟುಂಬದವರು ಮಾತನಾಡಿಕೊಂಡು ರುದ್ರಭೂಮಿಯಲ್ಲಿಯೇ ಅಂತ್ಯಕ್ರಿಯೆ ನಡೆಸಲು ಮುಂದಾದರು.
ಹಿಂದೆ ಮಂಗಳೂರಿನ ಸೊಸೈಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಕೆಲವು ಸಮಯದಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ. ಕಾರ್ತಿಕ್ ಮತ್ತು ಕುಟುಂಬ ತಂದೆ-ತಾಯಿಯ ಜತೆ ಪಕ್ಷಿಕೆರೆಯಲ್ಲಿ ತನ್ನ ಸಂಬಂಧಿಯ ಮಾಲಕತ್ವದ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದರು. ವಯೋವೃದ್ಧ ತಂದೆ-ತಾಯಿ ಪಕ್ಷಿಕೆರೆಯಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದರು ಎನ್ನಲಾಗಿದೆ. ಇನ್ನು ತಂದೆ ತಾಯಿಯೊಂದಿಗೆ ಕಾರ್ತಿಕ್ ಕುಟುಂಬ ಒಂದೇ ಮನೆಯಲ್ಲಿದ್ದರೂ ಅವರಲ್ಲಿ ಅನ್ಯೋನ್ಯತೆ ಇರಲಿಲ್ಲ. ಕಳೆದ 2-3 ವರ್ಷಗಳಿಂದ ಕಾರ್ತಿಕ್ ಕುಟುಂಬ ಪ್ರತ್ಯೇಕವಾಗಿ ಒಂದು ಕೋಣೆಯಲ್ಲಿದ್ದು, ತಂದೆ-ತಾಯಿಯ ಜತೆ ಬೆರೆಯುತ್ತಿರಲಿಲ್ಲ. ಊಟ-ತಿಂಡಿ ಎಲ್ಲವೂ ಹೊರಗೆ ಹೋಗಿ ಹೊಟೇಲ್ನಲ್ಲಿಯೇ ನಡೆಯುತಿತ್ತು. ಬೆಳಗ್ಗೆ ಅಪ್ಪ-ಅಮ್ಮ ಎದ್ದು ಕ್ಯಾಂಟೀನ್ಗೆ ಹೋಗುವ ವೇಳೆ ಚಹಾ ಮಾಡಿಟ್ಟು ಹೋಗುತ್ತಿದ್ದು ಅದನ್ನು ಸೇವಿಸುತ್ತಿದ್ದರು. ಅನಂತರ ತಿಂಡಿ, ಊಟ ಎಲ್ಲವೂ ಹೊರಗೆ ಮಾಡುತ್ತಿದ್ದರು. ಹಿಂದೆ ಮಂಗಳೂರಿನ ಸೊಸೈಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಕೆಲವು ಸಮಯದಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ ಎನ್ನಲಾಗಿದೆ.
ಪತ್ನಿ ಹಾಗೂ ಮಗುವಿನ ಕುತ್ತಿಗೆಗೆ ಇರಿದು ಕೊಲೆ; ಪತ್ನಿ ಹಾಗೂ ಮಗುವಿನ ಕುತ್ತಿಗೆ ಇರಿದು ಕೊಲೆ ಮಾಡಲಾಗಿದೆ. ಇಬ್ಬರನ್ನು ಕೂಡ ಕೊಲೆಗೈದು ನಂತರದಲ್ಲಿ ಕಾರ್ತಿಕ್ ರೂಮಿನಲ್ಲೇ ಆತ್ಮಹತ್ಯೆಗೆ ಯತ್ನಿಸಿರುವುದೂ ಗೊತ್ತಾಗಿದೆ. ಕೊಠಡಿಯಲ್ಲಿದ್ದ ಫ್ಯಾನ್ಗೆ ಸೀರೆ ಕಟ್ಟಿ ಆತ್ಮಹತ್ಯೆ ಯತ್ನ ನಡೆಸಿ ಅದರಲ್ಲಿ ವಿಫಲವಾದ ಬಳಿಕ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿ ರೈಲಿಗೆ ತಲೆ ಕೊಟ್ಟಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಈ ಕೊಲೆಯು ಪೂರ್ವ ನಿರ್ಧರಿತದಂತೆ ಕಾಣಿಸುತ್ತಿಲ್ಲ. ಫ್ಲ್ಯಾಟ್ನ ಬಾತ್ರೂಮಿನಲ್ಲಿದ್ದ ಕಿಟಕಿಯ ಗಾಜಿನ ಗ್ಲಾಸ್ ತೆಗೆದು ಅದನ್ನು ತುಂಡರಿಸಿ ಅದರಲ್ಲಿ ತಾಯಿ-ಮಗುವಿಗೆ ಇರಿಯಲಾಗಿದೆ. ಆದುದರಿಂದ ಕಾರ್ತಿಕ್ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಂತಿದೆ.
ಕಾರ್ತಿಕ್ ಹೊಸ ಸ್ಕೂಟರ್ ಅನ್ನು ಇತ್ತೀಚೆಗಷ್ಟೇ ಖರೀದಿಸಿದ್ದರು. ವಿಶೇಷ ಎಂದರೆ ಅದನ್ನು ತಂದೆಯ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದ. ಇದರ ಮೂಲದಿಂದಲೇ ಅವರ ವಿಳಾಸವನ್ನು ಪತ್ತೆ ಹಚ್ಚಲಾಗಿತ್ತು ಎನ್ನಲಾಗಿದೆ.


