ಮಹಾನಗರ: ಕೆಎಸ್ಸಾರ್ಟಿಸಿ ಸಂಸ್ಥೆಯು ಮಂಗಳೂರಿನಿಂದ ಕಾಸರಗೋಡು ನಡುವೆ ‘ಅಶ್ವಮೇಧ’ ಸೂಪರ್ ಫಾಸ್ಟ್ ಸರಕಾರಿ ಬಸ್ ಓಡಿಸಲು ಚಿಂತನೆ ನಡೆಸಿದ್ದು, ಈ ಕುರಿತಂತೆ ಸೂಪರ್ ಫಾಸ್ಟ್ ಬಸ್ ಗೆ ಕಾಸರಗೋಡಿನ ವಿಕಾಸ ಟ್ರಸ್ಟ್ನಿಂದ ರವಿನಾರಾಯಣ ಗುಣಾಜೆ ಅವರು ಬೆಂಗಳೂರಿನ ಕೇಂದ್ರ ಕಚೇರಿಗೆ ಮನವಿ ಮಾಡಿದ್ದರು.
ಕಾಸರಗೋಡಿನ ಹೆಚ್ಚಿನ ಮಂದಿ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಉದ್ಯೋಗ ಸೇರಿದಂತೆ ವಿವಿಧ ಕಾರಣದಿಂದ ಮಂಗಳೂರನ್ನು ಆಶ್ರಯ ಪಡೆದಿದ್ದಾರೆ. ಉಭಯ ಕೇಂದ್ರಗಳ ನಡುವಣ ಸುಮಾರು 50 ಕಿ.ಮೀ. ದೂರ ಇದ್ದು, ದಿನಂಪ್ರತಿ ಹೆಚ್ಚಿನ ಸಂಖ್ಯೆಯ ಮಂದಿ ಬಸ್ಗಳನ್ನೇ ಆಶ್ರಯಿಸಿದ್ದಾರೆ. ತಲಪಾಡಿ ಕಳೆದ ಬಳಿಕ ಕಾಸರಗೋಡಿನವರೆಗೆ ಈಗಿರುವ ಬಸ್ಗಳಿಗೆ ಅಲ್ಲಲ್ಲಿ ನಿಲುಗಡೆ ಇದ್ದು, ಸಂಬಂಧಿತ ರೂಟ್ ತಲುಪಲು ಹೆಚ್ಚಿನ ಸಮಯ ಬೇಕು. ಈ ಹಿನ್ನಲೆಯಲ್ಲಿ ಸೂಪರ್ ಫಾಸ್ಟ್ ಬಸ್ ಬೇಕೆಂಬ ಆಗ್ರಹ ಕೇಳಿ ಬಂದಿದೆ. ಮಂಗಳೂರು-ಕಾಸರಗೋಡು ನಡುವಣ ಈಗಾಗಲೇ 34 ಬಸ್ಗಳು 228 ಟ್ರಿಪ್ಗಳಲ್ಲಿ ಕಾರ್ಯಾಚರಿಸುತ್ತಿದೆ. ಈ ಎರಡೂ ರೂಟ್ಗಳ ನಡುವಣ ಸುಮಾರು 40ಕ್ಕೂ ಅಧಿಕ ಸ್ಟಾಪ್ಗಳಿದ್ದು, ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಕೆಲಸಕ್ಕೆಂದು ಬರುವವರಿಗೆ ಸಮಸ್ಯೆ ಉಂಟಾಗುತ್ತಿದ್ದು, ಸೂಪರ್ ಫಾಸ್ಟ್ ಬಸ್ಗೆ ಕಾಸರಗೋಡಿನ ವಿಕಾಸ ಟ್ರಸ್ಟ್ನಿಂದ ರವಿನಾರಾಯಣ ಗುಣಾಜೆ ಅವರು ಬೆಂಗಳೂರಿನ ಕೇಂದ್ರ ಕಚೇರಿಗೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಕಚೇರಿಯಿಂದ ಮಂಗಳೂರು ವಿಭಾಗಕ್ಕೆ ಪತ್ರ ಬರೆಯಲಾಗಿದ್ದು, ಬಸ್ ಒದಗಿಸಿದರೆ ಕಾರ್ಯಾಚರಣೆ ಮಾಡಲು ನಿರ್ಧಾರ ಮಾಡಲಾಗುತ್ತದೆ ಎಂದು ಉತ್ತರ ಬರೆಯಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಮಂಗಳೂರಿನಿಂದ ‘ಪಾಯಿಂಟ್ ಟು ಪಾಯಿಂಟ್’ ಮಾರ್ಗವಾಗಿ ಕಾರ್ಯಾಚ ರಿಸುತ್ತಿರುವ ಅಶ್ವಮೇಧ ಬಸ್ ಅನ್ನು ಮಂಗ ಳೂರು-ಕಾಸರಗೋಡು ಮಾರ್ಗವಾಗಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳೂರಿನಿಂದ ಸದ್ಯ 39 ಅಶ್ವಮೇಧ ಬಸ್ಗಳಿದ್ದು, ಮಂಗಳೂರು-ಮೈಸೂರು, ಮಂಗಳೂರು-ಹಾಸನ-ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಕಡೆಗೆ ಸಂಚರಿಸುತ್ತಿದೆ. ಇದೇ ರೀತಿ ‘ಪಾಯಿಂಟ್ ಟು ಪಾಯಿಂಟ್’ ಮಾರ್ಗವಾಗಿಯೇ ಮಂಗಳೂರು-ಕಾಸರಗೋಡು ಮಾರ್ಗವಾಗಿ ಅಶ್ವಮೇಧ ಬಸ್ ಕಾರ್ಯಾಚರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.