ಬಂಟ್ವಾಳ : ಬಾಗಿಲು ಮುರಿದು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ಪುದು ಗ್ರಾಮದ ಪೆರಿಯಾರ್ನ ಮನೆಯೊಂದರಲ್ಲಿ ನಡೆದಿದೆ.
ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಸಾಲ್ ಮನೆಗೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದಾರೆ.
ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಅವರು ಸೆ.8ರಂದು ಮನೆಗೆ ಬೀಗ ಹಾಕಿ ಪತ್ನಿ ಜೊತೆ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಸೆ.12ರಂದು ಮನೆಗೆ ವಾಪಾಸ್ಸಾದಾಗ ಮನೆಯ ಮುಂದಿನ ಬಾಗಿಲಿನ ಚಿಲಕ ಮುರಿದಿದ್ದು, ಬಾಗಿಲು ತೆರೆದುಕೊಂಡಿತ್ತು. ಒಳಗೆ ಹೋಗಿ ನೋಡಿದಾಗ ಕೋಣೆಯೊಂದರ ಕಪಾಟಿನ ಬೀಗ ಒಡೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಅದರೊಳಗಿದ್ದ 1.70 ಲಕ್ಷ ರೂ. ನಗದು, 1.80 ಲಕ್ಷ ರೂ. ಮೌಲ್ಯದ 36 ಗ್ರಾಂ ತೂಕದ ಪೆಂಡೆಂಟ್ ಸಹಿತ ಚಿನ್ನದ ಸರ, ಕಪಾಟಿನ ಮೇಲಿದ್ದ 4 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


