ಉಡುಪಿ: ದೇವಸ್ಥಾನದಲ್ಲಿ ಕಳುವಾದ ಹಣ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪತ್ತೆಯಾದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ನಡೆದಿದೆ.
ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನವಾಗಿದ್ದ ಹಣ ಹೆಮ್ಮಾಡಿ ಪ್ರಾಥಮಿಕ ಶಾಲೆಯ ಜಗಲಿಯಲ್ಲಿ ಪತ್ತೆಯಾಗಿದೆ.
ಶಾಲೆಯ ಆವರಣದಲ್ಲಿ ಇರಿಸಲ್ಪಟ್ಟಿದ್ದ ಚೀಲವನ್ನು ಬಿಡಿಸಿ ನೋಡಿದ್ದ ವಿದ್ಯಾರ್ಥಿಗಳು ಹಣ ನೋಡಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಮುಖ್ಯೋಪಾಧ್ಯಾಯರು ಕುಂದಾಪುರ ಗ್ರಾಮಾಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸುಮಾರು ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದ ದೇವಸ್ಥಾನದಲ್ಲಿ ಕಳೆದ ಶುಕ್ರವಾರ ತಡರಾತ್ರಿ ಕಳ್ಳತನ ನಡೆದಿತ್ತು.
ಸತ್ಯನಾರಾಯಣ ಪೂಜೆಗಾಗಿ ಭಕ್ತರಿಂದ ಸಂಗ್ರಹಿಸಲ್ಪಟ್ಟಿದ್ದ ಹಣವನ್ನು ಕದ್ದು ಕಳ್ಳ ಪರಾರಿಯಾಗಿರುವ ದೃಶ್ಯ, ದೇವಸ್ಥಾನದಲ್ಲಿ ಅಳವಡಿಸಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.