‘ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡದೆ ಸುರಕ್ಷಿತವಾಗಿ ಆಟವಾಡುತ್ತಿದ್ದಾರೆ,’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬರ್ಕ್ಲಿ ಕಾನೂನು ಕೇಂದ್ರದ 11 ನೇ ವಾರ್ಷಿಕ ಸಮ್ಮೇಳನದಲ್ಲಿ ‘ಸಮಾನತೆ ಮತ್ತು ತಾರತಮ್ಯ ವಿರೋಧಿ ನೀತಿ ಕುರಿತ ತುಲನಾತ್ಮಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಡಿ.ವೈ ಚಂದ್ರಚೂಡ್, “ಕೆಳ ನ್ಯಾಯಾಲಯದ ಜಡ್ಜ್ ಗಳು ಕ್ರಿಮಿನಲ್ ಪ್ರಕರಣಗಳನ್ನು ಅನುಮಾನದ ದೃಷ್ಟಿಕೋನದಲ್ಲಿ ನೋಡುವ ಮೂಲಕ ಆರೋಪಿಗಳಿಗೆ ಜಾಮೀನು ನೀಡಲು ಹಿಂಜರಿಯುತ್ತಿದ್ದಾರೆ. ನ್ಯಾಯಾಧೀಶರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಉದ್ದೇಶದಿಂದ ಜಾಮೀನು ನೀಡದೆ ಸುರಕ್ಷಿತ ಆಟವಾಡುತ್ತಿದ್ದಾರೆ” ಎಂದು ತಿಳಿಸಿದರು.
“ದೃಢವಾದ ಸಾಮಾನ್ಯ ಜ್ಞಾನದ ಅಗತ್ಯ ವಿಚಾರಣಾಧೀನ ನ್ಯಾಯಾಲಯದ ಜಡ್ಜ್ ಗಳಿಗಿದೆ. ಜಾಮೀನನ್ನು ಕೆಳ ನ್ಯಾಯಾಲಯದಲ್ಲೇ ಪಡೆಯಬೇಕಿದ್ದ ಜನರು, ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಹೈಕೋರ್ಟ್ ನಲ್ಲಿ ಜಾಮೀನು ಪಡೆಯಬೇಕಿದ್ದವರು ಸುಪ್ರೀಂ ಕೋರ್ಟ್ ಕದ ತಟ್ಟುತ್ತಿದ್ದಾರೆ. ಪರಿಣಾಮ ನ್ಯಾಯದಾನ ವಿಳಂಬಗೊಂಡು, ಸಂಕೀರ್ಣ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ದುರದೃಷ್ಟ ಏನೆಂದರೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ನೀಡುವ ತೀರ್ಪು ಅಥವಾ ಪರಿಹಾರದ ಆದೇಶಗಳನ್ನು ಸಮಾಜ ಅನುಮಾನದ ಕೋನದಲ್ಲಿ ನೋಡುತ್ತಿದೆ. ಹೀಗಾಗಿ ಜಡ್ಜ್ ಗಳು ತಮ್ಮ ಮೇಲೆ ಬರುವ ವ್ಯರ್ಥ ಆರೋಪಗಳಿಂದ ದೂರ ಉಳಿಯಲು ಜಾಮೀನು ನೀಡಲು ಹಿಂಜರಿಯುತ್ತಿದ್ದಾರೆ” ಎಂದು ವಿಶ್ಲೇಷಿಸಿದರು.


