ಉಡುಪಿ: ಮಳೆಯಿಂದಾಗಿ ಹಾನಿಗೊಳಗಾದ ಉಡುಪಿ ಜಿಲ್ಲೆಯ ಹಲವು ಪ್ರದೇಶಗಳಿಗೆ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂದಾಪುರ ತಾಲೂಕಿನ ಪಡು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಜ್ಜರಬೆಟ್ಟು, ಬೈಂದೂರು ತಾಲೂಕಿನ ಬಿಜೂರು ಗ್ರಾಮ, ದೊಂಬೆ ರಸ್ತೆಯ ಸೋಮೇಶ್ವರದ ಗುಡ್ಡ ಕುಸಿತ ಪ್ರದೇಶಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದರು.
ಅಲ್ಲದೇ ಗುಡ್ಡ ಕುಸಿತ ಭೀತಿಯಲ್ಲಿರುವ ಬೈಂದೂರಿನ ಒತ್ತಿಣೆನೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಉಡುಪಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಂಡು ಬರುವ ಗುಂಡಿಗಳನ್ನು ಮುಚ್ಚಿಸಬೇಕು ಗುತ್ತಿಗೆದಾರ ಕಂಪನಿ ಐಆರ್ ಬಿಗೆ ಸೂಚನೆ ನೀಡಿದರು.
ಮಧ್ಯಾಹ್ನದ ಬಳಿಕ ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಹೆಬ್ಬಾಳ್ಕರ್, ಸಂಜೆ ಕಾಪು ತಾಲೂಕಿನ ಪಡುಬಿದ್ರೆ ನಡಿಪಟ್ಲ ಬೀಚ್ ಗೆ ಭೇಟಿ ನೀಡಿ ಕಡಲ್ಕೊರೆತದ ಪ್ರಮಾಣವನ್ನು ಪರಿಶೀಲನೆ ನಡೆಸಿದರು.
ಇನ್ನು ಗುಜ್ಜರಬೆಟ್ಟು ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಕಡಲ್ಕೊರೆತ ಕೇವಲ ಗುಜ್ಜರಬೆಟ್ಟುವಿನಲ್ಲಿ ಮಾತ್ರ ಆಗಿಲ್ಲ, ಅಕ್ಕ ಪಕ್ಕದ ಪ್ರದೇಶದಲ್ಲಿ ಕೂಡ ಆಗಿದೆ, ಅಲ್ಲಿಗೂ ಭೇಟಿ ನೀಡಿ ಶಾಶ್ವತ ಪರಿಹಾರ ಕೈಗೊಳ್ಳಿ, ಕೇವಲ ಭರವಸೆ ಮಾತ್ರ ಯಾಕೆ ಕೊಡುತ್ತಿರಿ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೈಂದೂರು ತಾಲೂಕಿನ ಸೋಮೇಶ್ವರ ಗುಡ್ಡ ಕುಸಿತವನ್ನು ಸಮುದ್ರ ತೀರದಿಂದಲೇ ವೀಕ್ಷಿಸಿ ತೆರಳಿದ್ದಕ್ಕೆ ಸಚಿವರು ಬೀಚ್ ನೋಡಲು ಬಂದಿದ್ದಾ ಅಥವಾ ಗುಡ್ಡ ನೋಡಲು ಬಂದಿದ್ದಾ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.