ಮಸ್ಕಿ: ಇಲ್ಲಿನ ಕಾಲೇಜಿನ ಉಪನ್ಯಾಸಕರೊಬ್ಬರು ವಾಮಚಾರಕ್ಕೆ ಬಳಸುವ ವಸ್ತುಗಳನ್ನು ನೋಡಿ ಭಯಪಡುವ ಕಾಲದಲ್ಲಿ ವಾಮಚಾರಕ್ಕೆ ಇಟ್ಟಿದ್ದ ವಸ್ತುಗಳನ್ನು ತಿಂದು ಮೌಢ್ಯತೆ ಕುರಿತು ಜಾಗೃತಿ ಮೂಡಿಸಿದರು.
ಅಪರಿಚಿತರು ಪಟ್ಟಣದ ಮುದಗಲ್ಲ ರಸ್ತೆಯಲ್ಲಿನ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗೇಟಿನಲ್ಲಿ ತೆಂಗಿನಕಾಯಿ, ನಿಂಬೆ ಹಣ್ಣು, ಕುಂಕುಮವನ್ನಿಟ್ಟು ಹೋಗಿದ್ದರು.
ಕಾಲೇಜಿನ ಸಮಯದಲ್ಲಿ ಆಗಮಿಸಿದ ಉಪನ್ಯಾಸಕರು ಅದನ್ನು ದಾಟಿ ಸುಮ್ಮನೆ ಹೋಗದೆ, ನಿಂಬೆಹಣ್ಣು ಕತ್ತರಿಸಿ ಅದರ ರಸ ಸವಿದರು. ತೆಂಗಿನಕಾಯಿ ಹೊಡೆದು ಎಲ್ಲಾ ಉಪನ್ಯಾಸಕ ಹಾಗೂ ಪ್ರಾಂಶುಪಾಲರು ತಿಂದು ಮೌಢ್ಯತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮುದಗಲ್ಲ ರಸ್ತೆಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿದ್ದು, ಮುಂಜಾನೆ ವಾಯುವಿಹಾರಕ್ಕೆ ತೆರಳುವ ಜನರು, ಯುವಕರು ಭಯಭೀತರಗಿದ್ದಾರೆ. ವಾಮಾಚಾರ ಮಾಡುವ ಪರಿಕರಗಳು ಎಲ್ಲೆಡೆ ಸಾರ್ವಜನಿಕ ಸ್ಥಳದಲ್ಲಿ ಬಿಸಾಕಿದ್ದು ಕಂಡು ಬಂದಿವೆ. ಮೂರು ರಸ್ತೆ ಕೂಡುವ ರಸ್ತೆಗಳಲ್ಲಿ ಕೋಳಿ ಮೊಟ್ಟೆ, ತೆಂಗಿನಕಾಯಿ, ಎಲೆ, ಅಡಿಕೆ, ಮೆನಸಿನಕಾಯಿ, ನಿಂಬೆ ಹಣ್ಣು, ಮಣ್ಣಿನ ಗೊಂಬೆ ಎಸೆದಿರುತ್ತಾರೆ. ಕೆಲವೊಮ್ಮೆ ಶಾಲಾ-ಕಾಲೇಜಿನ ರಸ್ತೆಗಳಲ್ಲಿ ಎಸೆದಿರುತ್ತಾರೆ. ಪಟ್ಟಣದಲ್ಲಿ ದಿನೇ ದಿನೇ ವಾಮಾಚಾರಗಳಂತಹ ಕೃತ್ಯಗಳು ಹೆಚ್ಚಾಗುತ್ತಿದೆ.
ಸಾರ್ವಜನಿಕ ಸ್ಥಳದಲ್ಲಿ ಮೌಡ್ಯಚರಣೆ ಮಾಡುವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಹಾಗೂ ಮೌಢ್ಯತೆಯ ವಿರುದ್ಧ ತಾಲೂಕ ಆಡಳಿತ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಟಕ್ಕೆ ಬಳಸುವ ಪರಿಕರಗಳನ್ನು ಇಟ್ಟು ಹೋಗುತ್ತಿದ್ದು, ಪಟ್ಟಣದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲಿ ಮುದಗಲ್ಲ ರಸ್ತೆಗಳಲ್ಲಿ ಹೆಚ್ಚಾಗಿದ್ದು, ಈಚೆಗೆ ದೇವನಾಂಪ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೇಟ್ ಮುಂಭಾಗದಲ್ಲಿ ಲಿಂಬೆಹಣ್ಣು, ತೆಂಗಿನಕಾಯಿ, ಕುಂಕುಮ ಬಿಸಾಕಿ ಹೋಗಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಮಹಾಂತಗೌಡ ಪಾಟೀಲ ಹಾಗೂ ಉಪನ್ಯಾಸ ತಂಡ ಡಾ,ಪಂಪಾಪತಿ ನಾಯಕ, ಡಾ,ವೀರೇಶ, ಪ್ರಭುದೇವ ಸಾಲಿಮಠ, ಚನ್ನನಗೌಡ, ಹುಚ್ಚೇಶ ನಾಗಲೀಕರ್, ಮಂಜುನಾಥ, ಚಿದಾನಂದ, ಸುರೇಶ ಬಳಗಾನೂರು ಅವರು ಮಾಟಕ್ಕೆ ಇಟ್ಟಿದ್ದ ತೆಂಗಿನಕಾಯಿ ಲಿಂಬೆಹಣ್ಣು ತಿಂದು ಮೌಢ್ಯತೆಯ ವಿರುದ್ಧ ಜಾಗೃತಿ ಮೂಡಿಸಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.


