ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಇತರೆ ಆರೋಪಿಗಳು ಜೈಲುಪಾಲಾಗಿದ್ದು, ಇದೀಗ ಜೈಲಿನಲ್ಲಿನ ಊಟ, ಆಹಾರವನ್ನು ಸೇವಿಸಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಮನೆ ಊಟ, ಹಾಸಿಗೆ ಹಾಗೂ ಓದಲು ಪುಸ್ತಕ ನೀಡುವಂತೆ ವಕೀಲರ ಮೂಲಕ ದರ್ಶನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನಟ ದರ್ಶನ್ ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದು, ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿನ ದಿನಚರಿಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.ಜು.18ರವರೆಗೆ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಮುಂದುವರೆಯಲಿದ್ದಾರೆ.
ಈ ಕುರಿತಂತೆ ದರ್ಶನ್ ವಕೀಲರು, ‘ಜೈಲಿನಲ್ಲಿ ನೀಡುತ್ತಿರುವ ಊಟ ಸೇವಿಸಿ ಅವರಿಗೆ ಜೀರ್ಣವಾಗುತ್ತಿಲ್ಲ. ಇದರಿಂದ ಅತಿಸಾರ–ಭೇದಿ ಉಂಟಾಗುತ್ತಿದೆ. ಫುಡ್ ಪಾಯ್ಸನ್ ಆಗುತ್ತಿದೆ ಎಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆ,’ ಎಂದು ಅರ್ಜಿಯಲ್ಲಿ ದರ್ಶನ್ ವಕೀಲರು ಉಲ್ಲೇಖಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.


