ಮಂಗಳೂರು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲೆಯಲ್ಲಿ ವಿದ್ಯುತ್ ಅವಘಡದಿಂದ ಉಂಟಾಗಿರುವ ಮೂರು ಪ್ರಾಣ ಹಾನಿಗಳಿಗೆ ಸಂಬಂಧಿಸಿ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಇಂದು ನಡೆಸಿದ ವಿಶೇಷ ಸಭೆಯಲ್ಲಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಮತ್ತು ಸಿಬಂದಿ ಜತೆಗೆ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ನಡೆದ ವಿದ್ಯುತ್ ಅವಘಡಗಳ ಕುರಿತು ಚರ್ಚಿಸಿದರು. ಎರಡು ದಿನಗಳ ಒಳಗಾಗಿ ನಗರ ವ್ಯಾಪ್ತಿಯ ಎಲ್ಲ 1,600 ಮೀಟರ್ ಬಾಕ್ಸ್ಗಳಲ್ಲಿ ಟ್ರಿಪ್ಪರ್ ಬಾಕ್ಸ್ಗಳನ್ನು ಅಳವಡಿಸಬೇಕು. ಮರಗಳ ರೆಂಬೆ–ಕೊಂಬೆಗಳಿಗೆ ತಾಗಿಕೊಂಡಂತೆ ಹಾದು ಹೋಗಿರುವ ವಿದ್ಯುತ್ ತಂತಿಗಳು, ಕಂಬಗಳು ಇರುವ ಪ್ರದೇಶಗಳನ್ನು ಎರಡು ದಿನದಲ್ಲಿ ಗುರುತಿಸಿ, ಅರಣ್ಯ ಇಲಾಖೆಯ ಸಹಯೋಗದಲ್ಲಿ ತೆರವುಗೊಳಿಸಬೇಕು. ಈ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಬೀದಿದೀಪ ಕಂಬಗಳಲ್ಲಿ ವಿದ್ಯುತ್ ಲೀಕೇಜ್ ಟೆಸ್ಟ್ಗಳನ್ನು ಮೆಸ್ಕಾಂ ಮತ್ತು ಮನಪಾ ಅಧಿಕಾರಿಗಳು ಜಂಟಿಯಾಗಿ ನಡೆಸಬೇಕು. ಮುಂದಿನ ದಿನಗಳಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಎಲ್ಲ ಇನ್ಸಿಡೆಂಟ್ ಕಮಾಂಡರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ದೂರವಾಣಿಯನ್ನು 24*7 ಚಾಲ್ತಿಯಲ್ಲಿಡಬೇಕು. ವಿಕೋಪಗಳು ಉಂಟಾದ ಸಂದರ್ಭದಲ್ಲಿ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.