ನವದೆಹಲಿ: ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಸತತ ಎರಡನೇ ಬಾರಿಗೆ ಕೇಂದ್ರ ಸಚಿವೆಯಾಗುವ ಅವಕಾಶ ಪಡೆದಿದ್ದಾರೆ.
ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದೆಯಾಗಿದ್ದ ಅವಧಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾಗಿ ಶೋಭಾ ಕರಂದ್ಲಾಜೆ ಕಾರ್ಯನಿರ್ವಹಿಸಿದ್ದರು.
ಈ ಬಾರಿ ಕೂಡಾ ಶೋಭಾ ಕರಂದ್ಲಾಜೆಗೆ ರಾಜ್ಯ ದರ್ಜೆ ಸಚಿವೆ ಸ್ಥಾನ ದೊರೆಯಲಿದ್ದು, ಇಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಶೋಭಾ ಕರಂದ್ಲಾಜೆಗೆ ನರೇಂದ್ರ ಮೋದಿ ಸಂಪುಟದಲ್ಲಿ ಅವಕಾಶ ಸಿಗುವುದರೊಂದಿಗೆ ಡಿ.ವಿ. ಸದಾನಂದ ಗೌಡರ ಬಳಿಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ, ಒಕ್ಕಲಿಗ ಸಮುದಾಯಕ್ಕೆ ಮತ್ತು ಕರಾವಳಿ ಭಾಗಕ್ಕೆ ಪ್ರಾಧಾನ್ಯತೆ ದೊರೆತಂತಾಗಿದೆ.
ಕಳೆದ ಬಾರಿ ದಕ್ಷಿಣ ಭಾರತದಿಂದ ಏಕೈಕ ಮಹಿಳಾ ಬಿಜೆಪಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ, ಈ ಬಾರಿ ರಾಜ್ಯದಿಂದ ಗೆದ್ದಿರುವ ಏಕೈಕ ಮಹಿಳಾ ಬಿಜೆಪಿ ಸಂಸದೆಯಾಗಿದ್ದಾರೆ.