ಬೆಳ್ತಂಗಡಿ; ಚುನಾವಣಾ ತಪಾಸಣೆ ಹಿನ್ನೆಲೆ ವಾಹನ ತಪಾಸಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಅಕ್ರಮವಾಗಿ ಗೋ ಸಾಗಿಸುತ್ತಿದ್ದ ಗೋಕಳ್ಳರು ಸಿಕ್ಕಿ ಬಿದ್ದ ಘಟನೆ ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವೇಣೂರು- ನೈನಾಡು ರಸ್ತೆಯಲ್ಲಿ ನಡೆದಿದೆ.
ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಶೈಲ ಡಿ ಮುಗೋಡು ರವರು ಹಾಗೂ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಆ ರಸ್ತೆಯಲ್ಲಿ ಬಂದ ಕೆಎ 21 ಬಿ 1902 ನೇ ಅಶೋಕ್ ಲೈಲ್ಯಾಂಡ್ ದೋಸ್ತ್ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ವಾಹನ ಚಾಲಕನು ವಾಹನವನ್ನು ನಿಲ್ಲಿಸದೆ ವೇಣೂರು ಕಡೆಗೆ ಚಲಾಯಿಸಿದ್ದಾನೆ. ಕೂಡಲೇ ಪೊಲೀಸ್ ಸಿಬ್ಬಂದಿ ಇಲಾಖಾ ಜೀಪಿನಲ್ಲಿ ಹಿಂಬಾಲಿಸಿಕೊಂಡು ಸುಮಾರು ½ ಕಿ.ಮೀ ದೂರ ಶಾಂತಿರೊಟ್ಟು ಎಂಬಲ್ಲಿಗೆ ತಲುಪಿದಾಗ, ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ವಾಹನದಿಂದ ಇಳಿದು ಗೇರುಗಿಡಗಳ ನಡುತೋಪಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ವಾಹನವನ್ನು ಪರಿಶೀಲಿಸದಾಗ 04 ಜಾನುವಾರುಗಳನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಜಾನುವಾರುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ವಾಹನವನ್ನು ಸ್ವಾದೀನಪಡಿಸಿಕೊಂಡು, ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ 31/2024, ಕಲಂ : 5,7,12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.