ಮಂಗಳೂರು: ಕೊಣಾಜೆ ಮೂಲದ ಕಾಲೇಜು ವಿದ್ಯಾರ್ಥಿಯೊಬ್ಬ ಕಾಣೆಯಾಗಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಣಾಜೆ ನಿವಾಸಿ ನಮಿತ್ (24) ನಾಪತ್ತೆಯಾದ ವಿದ್ಯಾರ್ಥಿ.
ನಮಿತ್ ಇತ್ತೀಚಿಗೆ ಬಿಕಾಂ ವಿದ್ಯಾಭ್ಯಾಸ ಮುಗಿಸಿದ್ದು, ಮನೆಯವರ ಸೂಚನೆ ಮೇರೆಗೆ ಉನ್ನತ ವ್ಯಾಸಂಗಕ್ಕೆ ಮನೆಯಿಂದ 25 ಸಾವಿರ ರೂ. ನಗದು ಪಡೆದುಕೊಂಡಿದ್ದು, ಮಾಡೂರಿನ ಕಾಲೇಜೊಂದರಲ್ಲಿ ಪ್ರವೇಶಾತಿ ಪಡೆದಿರುವುದಾಗಿ ತಿಳಿಸಿದ್ದ. ಪ್ರತಿ ದಿನ ಕಾಲೇಜಿಗೆಂದು ತೆರಳಿ ಸಂಜೆ ವಾಪಾಸಾಗುತ್ತಿದ್ದ.
ಕಾಲೇಜಿನ ಫೀಸ್ ಕಟ್ಟಲು ಅ.17ರಂದು ಕಾಲೇಜು ಖಾತೆಗೆ 1.25 ಲಕ್ಷ ರೂ. ವರ್ಗಾವಣೆ ಮಾಡಿಸಿದ್ದ. ಆದರೆ ಅ.25ರಂದು ಬೆಳಗ್ಗೆ ಕಾಲೇಜಿನ ಸಿಬ್ಬಂದಿ ಆತನ ತಂದೆಗೆ ಕರೆ ಮಾಡಿ, ನಿಮ್ಮ ಮಗ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆದಿಲ್ಲ, ಪಾವತಿಸಿರುವ ಮೊತ್ತವನ್ನು ವಾಪಾಸು ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ. ಈ ವಿಚಾರದ ಕುರಿತು ಪೋಷಕರು ನಮಿತ್ನಲ್ಲಿ ವಿಚಾರಿಸಿದಾಗ ಆತ ಪ್ರತಿಕ್ರಿಯೆ ನೀಡಿಲ್ಲ. ನಂತರದಲ್ಲಿ ಆತ ನೇರವಾಗಿ ಕಾಲೇಜಿಗೆ ಭೇಟಿ ನೀಡಿದ್ದು, ಸಿಬ್ಬಂದಿ ಹತ್ತಿರ ಹಣ ವಾಪಸು ಕೊಡುವಂತೆ ಕೇಳಿದ್ದಾನೆ. ಇದರಿಂದ ಅನುಮಾನಗೊಂಡ ಕಾಲೇಜು ಸಿಬಂದಿ, ಆತನ ತಂದೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿಯನ್ನು ಪಡೆದು ಆತನ ತಂದೆ ಕಾಲೇಜಿಗೆ ಭೇಟಿ ನೀಡಿದ್ದಾರೆ. ಆದರೆ ಅದಾಗಲೇ ನಮಿತ್ ಅಲ್ಲಿಂದ ತೆರಳಿದ್ದ. ತತ್ಕ್ಷಣ ಮನೆಗೆ ಕರೆಮಾಡಿ ಕೇಳಿದಾಗ ಮಧ್ಯಾಹ್ನ ಆಟೋದಲ್ಲಿ ಮನೆಗೆ ಬಂದು ಅದೇ ಆಟೋದಲ್ಲಿ ವಾಪಸು ಹೋಗಿರುವುದಾಗಿ ಯುವಕನ ತಾಯಿ ತಿಳಿಸಿದ್ದಾರೆ. ಈ ವಿಚಾರ ನಡೆದ ನಂತರ ಆತ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಮನಕ್ಕೆ: 6.2 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು, ಕೋಲು ಮುಖ, ಮೂಗಿನಲ್ಲಿ ಕಪ್ಪು ಮಚ್ಚೆ, ಉಬ್ಬು ಹಲ್ಲು ಇದೆ. ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಬಲ್ಲವನಾಗಿದ್ದು, ಹಳದಿ ಬಣ್ಣದ ಟಿ-ಶರ್ಟ್ ಮತ್ತು ನಸು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ ಈತನ ಬಗ್ಗೆ ಮಾಹಿತಿಯಿದ್ದಲ್ಲಿ ಕೊಣಾಜೆ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.