ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನದಲ್ಲಿ ಆಯೋಜಿಸಿರುವ ಫಿಡೆ ರೇಟೆಡ್ ಅಖಿಲ ಭಾರತ ಚೆಸ್ ಟೂರ್ನಿಯ ಮೂರನೇ ದಿನ ಇಂದ್ರಜೀತ್ ಮಹೀಂದ್ರಕರ್ ಮತ್ತು ನಿಗಶ್ ಜಿ ಸೇರಿದಂತೆ ಐವರು ಮುನ್ನಡೆ ಸಾಧಿಸಿದರು.
ಟೂರ್ನಿಯ ಎರಡನೇ ದಿನದಂದು ಉತ್ತಮವಾಗಿ ಆಟ ಪ್ರದರ್ಶಿಸಿದ್ದ ಕರ್ನಾಟಕದ ಆಟಗಾರರು ಗುರುವಾರ ನಿರಾಸರಾದರು. ತಮಿಳುನಾಡು, ಮಹಾರಾಷ್ಟ್ರ ಆಟಗಾರರು ಪಾರನ್ಯ ಮೆರೆದರು. ಅಗ್ರ ಶ್ರೇಯಾಂಕದ, ದಕ್ಷಿಣ ಕನ್ನಡ ಜಿಲ್ಲೆಯ ಆಟಗಾರ ಗಹನ್ ಎಂ.ಜಿ ಐದು ಸುತ್ತುಗಳ ಮುಕ್ತಾಯಕ್ಕೆ 4 ಪಾಯಿಂಟ್ಗಳೊಂದಿಗೆ ಹಿನ್ನಡೆ ಅನುಭವಿಸಿದರು.
ಮಹಾರಾಷ್ಟ್ರದ ಇಂದ್ರಜೀತ್ ಮಹೀಂದ್ರಕ, ಅದಿತ್ಯ ಸಾವಳ, ತಮಿಳುನಾಡಿನ ನಿಗಶ್ ಜಿ, ಕೃಪೇಶ್ ಐ ಮತ್ತು ಕೇರಳದ ಅನಿಲ್ ಕುಮಾರ್ ಒ.ಟಿ 5 ಪಾಯಿಂಟ್ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಆಗಸ್ಟಿನ್ ಎ ಮತ್ತು ಮೇಧಾಂಶ್ ರಾಠಿ 4.5 ಪಾಯಿಂಟ್ಗಳೊಂದಿಗೆ ಭರವಸೆ ಮೂಡಿಸಿದರೆ, ಅನ್ಸುಲ್ ಪಣಿಕ್ಕರ್, ಸುಶಾಂತ್ ವಾಮನ್ ಶೆಟ್ಟಿ, ಸಿದ್ಧಾಂತ್ ಪೂಂಜಾ ಮತ್ತು ಧ್ರುವ ಚಿಪ್ತಿ ಅವರಿಗೆ 4 ಪಾಯಿಂಟ್ ಮಾತ್ರ ಗಳಿಸಲು ಸಾಧ್ಯವಾಯಿತು.
5ನೇ ಸುತ್ತಿನಲ್ಲಿ ಅಫ್ರೀದ್ ಖಾನ್ (1634) ವಿರುದ್ಧ 1990 ಯೆಲೊ ರೇಟಿಂಗ್ ಹೊಂದಿರುವ ಮಹಾರಾಷ್ಟ್ರದ ಇಂದ್ರಜೀತ್ ಮಹೀಂದ್ರಕರ್ ಜಯ ಸಾಧಿಸಿದರು. ತಮಿಳುನಾಡಿನ ನಿಗಶ್ ಜಿ (1662) ತಮಗಿಂತ ಹೆಚ್ಚಿನ ರೇಟಿಂಗ್ ಹೊಂದಿರುವ ಕೇರಳದ ಶಾರ್ಶ ಬೇಕರ್ (1965) ವಿರುದ್ಧ ಜಯ ಸಾಧಿಸಿದರು.
ಇನ್ನು ಕೇರಳ ರಾಜ್ಯದ ಮಾಜಿ ಚಾಂಪಿಯನ್ ಅನಿಲ್ ಕುಮಾರ್ ಒ.ಟಿ (1875) ಎದುರು ಸುಶಾಂತ್ ವಾಮನ್ ಶೆಟ್ಟಿ ಸೋಲನುಭವಿಸಿದರು. ಕೃಪೇಶ್ ಮತ್ತು ಆದಿತ್ಯ ಸಾವಳ ಕ್ರಮವಾಗಿ ಕರ್ನಾಟಕದ ಸಿದ್ಧಾಂತ್ ಪೂಂಜಾ ವಿರುದ್ಧ ಮತ್ತು ಕೇರಳದ ರಜಿತ್ ವಿ ಎದುರು ಜಯ ಗಳಿಸಿದರು.