ಮೈಸೂರು: ಈ ವರ್ಷದ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಅಂತಿಮ ಪಟ್ಟಿ ಬಿಡುಗಡೆಗೊಂಡಿದೆ.
ಈ ಬಾರಿಯೂ 14 ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮಗೊಳಿಸಿದ್ದು, ಗಜ ಪಯಣ ಆರಂಭವಾಗಿ ಮೊದಲ ಹಂತದಲ್ಲಿ ಒಂಬತ್ತು ಆನೆಗಳು ಮೈಸೂರು ತಲುಪಿವೆ. ಎರಡನೇ ಹಂತದಲ್ಲಿ ಐದು ಆನೆಗಳು ಬರಲಿವೆ.
ಅಭಿಮನ್ಯು, ವಿಜಯ, ವರಲಕ್ಷ್ಮಿ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮಿ ಮತ್ತು ಹಿರಣ್ಯ ಆನೆಗಳನ್ನು ಜಂಬೂ ಸವಾರಿಗಾಗಿ ಅಂತಿಮಗೊಳಿಸಲಾಗಿದೆ.
ಈ ಪೈಕಿ ಈಗಾಗಲೇ ಅಭಿಮನ್ಯು, ಅಂಜನ್, ಮಹೇಂದ್ರ, ವಿಜಯ, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ ಮತ್ತು ಅರ್ಜುನ ಮೈಸೂರು ತಲುಪಿದ್ದು, ಪ್ರಶಾಂತ, ಸುಗ್ರೀವ, ರೋಹಿತ್, ಲಕ್ಷ್ಮಿ ಮತ್ತು ಹಿರಣ್ಯ ಇನ್ನಷ್ಟೇ ಆಗಮಿಸಬೇಕಿದೆ.
ಮೊದಲ ಹಂತದಲ್ಲಿ ಬಂದಿರುವ ಆನೆಗಳು ಐದು ದಿನಗಳ ಕಾಲ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಇರಲಿದ್ದು, ಮುಂದಿನ ಮಂಗಳವಾರ ಅರಮನೆಯತ್ತ ತೆರಳಲಿವೆ.