ನೆಲ್ಯಾಡಿ; ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಮಂಗ ದಾಳಿ ಮಾಡಿರುವ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ನಡೆದಿದೆ.ಕೌಕ್ರಾಡಿ ಗ್ರಾಮದ ಲಾವತ್ತಡ್ಕ ನಿವಾಸಿ ತ್ರೇಸಿಯಮ್ಮ ಕೆ.ವಿ.(40)ಗಾಯಗೊಂಡವರು.
ತ್ರೇಸಿಯಮ್ಮ ತನ್ನ ವಿಕಲಚೇತನ ಮಗನನ್ನು ಉಜಿರೆ ಎಸ್ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲು ಪೆರಿಯಶಾಂತಿಗೆ ಬಂದು ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಬಾಲಕನ ಬಳಿಗೆ ಕೋತಿಯೊಂದು ಬಂದಿದ್ದು ಅದನ್ನು ತಡೆಯಲು ಮುಂದಾದ ವೇಳೆ ದಾಳಿ ನಡೆಸಿದ ಕೋತಿ ಕೈಗೆ ಕಚ್ಚಿ ಗಾಯಗೊಳಿಸಿದೆ. ಬಳಿಕ ಅವರು ಉಜಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಪೆರಿಯಶಾಂತಿಯಲ್ಲಿ ಹೆದ್ದಾರಿ ಬದಿ ಬೀದಿ ವ್ಯಾಪರ ನಡೆಯುತ್ತಿದ್ದು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಸಾಕಷ್ಟು ಪ್ರವಾಸಿಗರು ಖರೀದಿಗಾಗಿ ಇಲ್ಲಿ ತಮ್ಮ ವಾಹನ ನಿಲ್ಲಿಸಿ ಮುಂದೆ ಸಾಗುತ್ತಾರೆ. ಪ್ರವಾಸಿಗರು ಹಣ್ಣು, ಹಂಪಲು ಕೋತಿಗಳಿಗೂ ನೀಡುತ್ತಿದ್ದು ಅವುಗಳೂ ಇಲ್ಲಿ ಓಡಾಡುತ್ತಿವೆ. ಕೋತಿ ದಾಳಿ ನಡೆಸಿ ಗಾಯಗೊಳಿಸಿರುವ ಬಗ್ಗೆ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಯವರ ಗಮನಕ್ಕೂ ತಂದಿದ್ದಾರೆ ಎಂದು ತಿಳಿದುಬಂದಿದೆ.