ಉಡುಪಿ; ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಚೂರಿ ಇರಿದ ಘಟನೆ ಉದ್ಯಾವರ ಜೈಹಿಂದ್ ಜಂಕ್ಷನ್ ಬಳಿ ನಡೆದಿದೆ.
ಕುಡಿದ ಅಮಲಿನಲ್ಲಿದ್ದ ಸ್ಕೂಟರ್ ಸವಾರರು ಪಾದಚಾರಿಗಳಿಬ್ಬರ ಜತೆ ವಾಗ್ವಾದ ನಡೆಸಿ ಬಳಿಕ ಚೂರಿಯಿಂದ ಇರಿದಿದ್ದಾರೆ.
ಉದ್ಯಾವರ ಗ್ರಾಮದ ನಿವಾಸಿಗಳಾದ ಜಯರಾಮ ತಿಂಗಳಾಯ ಮತ್ತು ಸಂದೀಪ್ ಅವರಿಗೆ, ಕುರ್ಕಾಲು ಸುಭಾಸ್ ನಗರದ ನಿವಾಸಿಗಳಾದ ಪ್ರೇಮನಾಥ್, ಸಂಪತ್ ಚೂರಿಯಿಂದ ಇರಿದಿದ್ದಾರೆ.
ಜಯರಾಮ ತಿಂಗಳಾಯ ಮತ್ತು ಸಂದೀಪ್ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ಎದುರಿನಿಂದ ಹೆಡ್ಲೈಟ್ ಹಾಕದೆ ಸ್ಕೂಟರ್ವೊಂದರಲ್ಲಿ ಬಂದ ಆರೋಪಿಗಳು ರಸ್ತೆ ದಾಟಲು ನಿಂತಿದ್ದವರಿಗೆ ಢಿಕ್ಕಿ ಹೊಡೆಯುವ ರೀತಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದರು.ಈ ವೇಳೆ ಜಯರಾಮ ತಿಂಗಳಾಯ ಅವರು ಪ್ರಶ್ನಿಸಿದಾಗ ಸ್ಕೂಟರ್ನ ಹಿಂಬದಿ ಸವಾರ ತನ್ನ ಕೈಯಲ್ಲಿದ್ದ ಹರಿತವಾದ ಚೂರಿಯಿಂದ ಜಯರಾಮ ಅವರಿಗೆ ಚುಚ್ಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ವೇಳೆ ಸ್ಥಳಕ್ಕೆ ಬಂದವರು ಇರಿತಕ್ಕೊಳಗಾದವರನ್ನು ವಾಹನವೊಂದರಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲಿಸಿದ್ದಾರೆ.ಕಾಪು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದು, ಬಂಧಿತರಿಗೆ ನ್ಯಾಯಾಲಯ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.


