Thursday, June 4, 2026
Homeಕರಾವಳಿಮಂಗಳೂರು; ಬಸ್ ಗೆ ಅಡ್ಡ ಬಂದ ಮಹಿಳೆಯನ್ನು ಬಸ್ ಚಾಲಕ ರಕ್ಷಿಸಿದ ಪ್ರಕರಣ; ಮಹಿಳೆ ಹಾಗೂ...

ಮಂಗಳೂರು; ಬಸ್ ಗೆ ಅಡ್ಡ ಬಂದ ಮಹಿಳೆಯನ್ನು ಬಸ್ ಚಾಲಕ ರಕ್ಷಿಸಿದ ಪ್ರಕರಣ; ಮಹಿಳೆ ಹಾಗೂ ಬಸ್ ಚಾಲಕ ಇಬ್ಬರ ವಿರುದ್ಧವೂ ದೂರು ದಾಖಲು

- Advertisement -
- Advertisement -

ಮಂಗಳೂರು: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ತೌಡುಗೋಳಿ ಕ್ರಾಸ್ ಬಳಿ ಬಸ್ ಗೆ ಅಡ್ಡ ಬಂದ ಮಹಿಳೆಯನ್ನು ಬಸ್ ಚಾಲಕ ತನ್ನ ಸಮಯಪ್ರಜ್ಞೆಯಿಂದ ರಕ್ಷಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಸ್ತೆ ದಾಟಿದ ಮಹಿಳೆ ಹಾಗೂ ಬಸ್ ಚಾಲಕ ಇಬ್ಬರ ವಿರುದ್ಧವೂ ದೂರು ದಾಖಲಾಗಿದೆ.ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಸರಗೋಡು ಜಿಲ್ಲೆಯ ವರ್ಕಾಡಿಯ ಐಸಮ್ಮ (63) ಎಂಬವರು ರಸ್ತೆ ದಾಟುವಾಗ ನಿರ್ಲಕ್ಷ್ಯ ವಹಿಸಿರುವುದರ ವಿರುದ್ಧ ಸಂಚಾರ ನಿಯಂತ್ರಣ ನಿಯಮ ಸೆ.13 ಮತ್ತು ಸೆ.92ಜಿ ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ದಕ್ಷಿಣ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.

ಮಂಗಳೂರಿನಿಂದ ಮುಡಿಪುಗೆ ತೆರಳುತ್ತಿದ್ದ ಗೋಪಾಲಕೃಷ್ಣ ಎಂಬ ಹೆಸರಿನ ಖಾಸಗಿ ಬಸ್ ತೌಡುಗೋಳಿ ಕ್ರಾಸ್ ಬಳಿ ಸಂಚರಿಸುತ್ತಿದ್ದಾಗ ವರ್ಕಾಡಿಯ ಐಸಮ್ಮ ರಸ್ತೆ ದಾಟುವಾಗ ನಿರ್ಲಕ್ಷಿಸಿದ್ದರು ಮತ್ತು ಸಂಚಾರ ನಿಯಮವನ್ನು ಪಾಲಿಸಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೊಲೀಸರು ಘಟನೆ ನಡೆದ ಎರಡು ದಿನದ ಬಳಿಕ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಂತೆ ಈ ಮಹಿಳೆಯು ನ್ಯಾಯಾಲಯದ ಮೂಲಕ ದಂಡ ಪಾವತಿಸಬೇಕಾಗಿದೆ.

ಮಹಿಳೆಯು ಬಸ್ಸನ್ನು ಗಮನಿಸದೆ ರಸ್ತೆ ದಾಟಿದ್ದು, ತಕ್ಷಣ ಬಸ್ ಚಾಲಕ ಬಸ್ಸನ್ನು ಎಡಕ್ಕೆ ಸರಿಸಿದ್ದಾರೆ. ಇದರಿಂದ ಮಹಿಳೆಯು ಪ್ರಾಣಾಪಾಯದಿಂದ ಪಾರಾಗಿದ್ದರು. ಸಿಸಿಟಿವಿಯಲ್ಲಿ ದಾಖಲಾದ ಈ ಘಟನೆಯ ದೃಶ್ಯವು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಮಹಿಳೆಗೆ ಬಸ್ ಢಿಕ್ಕಿ ಹೊಡೆಯುವುದನ್ನು ಬಸ್ ಚಾಲಕ ತಪ್ಪಿಸಿದ್ದರೂ, ಕರ್ಕಶ ಹಾರ್ನ್‌ನೊಂದಿಗೆ ಕಿರಿದಾದ ರಸ್ತೆಯಲ್ಲಿ ಅತಿವೇಗ, ಅಜಾಗರೂಕತೆಯ ಬಸ್ ಚಾಲನೆಯ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸಿದ್ದರು. ಅಲ್ಲದೆ ಕರ್ಕಶ ಹಾರ್ನ್ ಕಿತ್ತು ಹಾಕಿದ್ದರು. ಇದೀಗ ಘಟನೆ ನಡೆದ ಎರಡು ದಿನದ ಬಳಿಕ ರಸ್ತೆ ದಾಟುವಾಗ ನಿರ್ಲಕ್ಷ್ಯ ವಹಿಸಿದ ಮಹಿಳೆಯ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!