ಮಂಗಳೂರು: ನಗರದ ಹೊರವಲಯದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮತ್ತು ಪ್ರಸಿದ್ಧ ಪಿಲಿಕುಳ ನಿಸರ್ಗಧಾಮದಲ್ಲಿರುವ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 15 ಜಿಂಕೆಗಳು ಸಾವನ್ನಪ್ಪಿದ ಘಟನೆ ಇಂದು ತಡವಾಗಿ ಬೆಳಕಿಗೆ ಬಂದಿದೆ.
ಕೊರೋನಾ ಲಾಕ್ ಡೌನ್ ನಿಂದಾಗಿ ನಿಸರ್ಗಧಾಮದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಎರಡು ವಾರಗಳ ಹಿಂದೆಯಷ್ಟೇ ಸರ್ಕಾರದ ನಿರ್ದೇಶನದಂತೆ ಪಿಲಿಕುಳ ಜೈವಿಕ ಉದ್ಯಾನ, ಲೇಕ್ ಗಾರ್ಡನ್, ಕುಶಲಕರ್ಮಿಗಳ ಗ್ರಾಮ, ಗುತ್ತುಮನೆ ಇತ್ಯಾದಿ ವಿಭಾಗಗಳಿಗೆ ಸಂದರ್ಶಕರಿಗೆ ಅವಕಾಶ ಒದಗಿಸಲಾಗಿತ್ತು.
ಆದರೆ ಈ ನಿನ್ನೆ ರಾತ್ರಿ ನಿಸರ್ಗಧಾಮದ ಪಕ್ಕದಲ್ಲಿರುವ ಡಂಪಿಂಗ್ ಯಾರ್ಡ್ ನಿಂದ ಬೀದಿ ನಾಯಿಗಳು ಜಿಗಿದು ನಿಸರ್ಗಧಾಮದ ಒಳಗೆ ಬಂದಿದ್ದು, ಜಿಂಕೆಗಳ ಮೇಲೆ ದಾಳಿ ಮಾಡಿದೆ.

ಜಿಂಕೆಗಳ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾದ ಕಾರಣ 15 ಜಿಂಕೆಗಳು ಸಾವನ್ನಪ್ಪಿದೆ. ಎರಡು ಜಿಂಕೆಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಆಡಳಿತವರ್ಗದ ನಿಲ್ಯಕ್ಷ
ಅಮಾಯಕ ಪ್ರಾಣಿಗಳಿಗೆ ಸರಕಾರ ನಡೆಸುವ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ನಿಸರ್ಗಧಾಮದ ಆಡಳಿತ ವರ್ಗದ ನಿಲ್ಯಕ್ಷವೇ ಈ ಘಟನೆಗೆ ನೇರ ಹೊಣೆ. 6 ಅಡಿ ಭೌತಿಕ ದೂರ, ಮಾಸ್ಕ್ ಕಡ್ಡಾಯ, ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸಿಯೇ ಪ್ರವಾಸಿಗರನ್ನು ಒಳಬಿಡುತ್ತೇವೆ ಎಂದು ಕೆಲದಿನಗಳ ಹಿಂದೆ ಪತ್ರಿಕಾ ಪ್ರಕಟಣೆ ನೀಡಿರುವ ಪಿಲಿಕುಳ ಜೈವಿಕ ಉದ್ಯಾನ ನಿರ್ದೇಶಕರು, ಆದರೆ ಬೀದಿನಾಯಿಗಳ ಪ್ರವೇಶಕ್ಕೆ ಯಾವುದೇ ರೀತಿಯ ಮಾನದಂಡ ನೀಡದೆ ಇರುವುದು ಆಡಳಿತ ಮಂಡಳಿಯ ಆಡಳಿತ ವೈಖರಿಗೆ ಹಿಡಿದಿರುವ ಕೈಗನ್ನಡಿ ಎಂದು ಪರಿಸರಪ್ರೇಮಿಗಳ ವಾದವಾಗಿದೆ.
ನಿಸರ್ಗಧಾಮದ ಮೃಗಾಲಯದಲ್ಲಿ ಜಿಂಕೆಗಳ ಸಂಖ್ಯೆ ಜಾಸ್ತಿಯಾಗಿದ್ದು, ಕೆಲವು ಜಿಂಕೆಗಳನ್ನು ಕಾಡಿಗೆ ಬಿಡಲು ನಿರ್ಧರಿಸಲಾಗಿತ್ತು. ಆದರೆ ಅಷ್ಟರಲ್ಲಿ ಈ ದಾಳಿ ನಡೆದು 15 ಜಿಂಕೆಗಳು ಸಾವನ್ನಪ್ಪಿದೆ.