ಧರ್ಮಸ್ಥಳ:ಕನ್ಯಾಡಿಯಲ್ಲಿ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ವೇಳೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಯುವ ವಾಗ್ಮಿ ಶ್ರೀದೇವಿ ಪುತ್ತೂರು
ಗಣೇಶೋತ್ಸವ ರಾಷ್ಟ್ರೀಯತೆಯ ಭಾವವನ್ನು ಜಾಗರಣ ಮಾಡುವ ಜನರ ಉತ್ಸವ. ಸ್ವಾತಂತ್ರ್ಯ ಹೋರಾಟದಲ್ಲಿ ಬಾಲಗಂಗಾಧರ ತಿಲಕರ ನೇತೃತ್ವದಲ್ಲಿ ಸರ್ವರ ಮನೆಬಾಗಿಲಿಗೆ ದೇವರನ್ನು ಕೊಂಡೊಯ್ದು ಸಂಘಟಿತ ಸಮಾಜವನ್ನು ಕಟ್ಟುವುದಕ್ಕೆ ಸಹಕರಿಸಿದ ಧಾರ್ಮಿಕ ಉತ್ಸವ. ಇದರ ಮೂಲಕ ಸ್ವರಾಜ್ಯ, ಸ್ವದೇಶಿ, ರಾಷ್ಟ್ರೀಯ ಶಿಕ್ಷಣದ ಚಿಂತನೆಗಳನ್ನು ಸಮಾಜದ ಮುಂದಿಡಲು ಸಾಧ್ಯವಾಯಿತು ಎಂದು ಹೇಳಿದರು.
ಭಾರತವನ್ನು ಕೇವಲ ನಕ್ಷೆಯಲ್ಲಿರುವ ದೇಶ ಮಾತ್ರ ಎಂದುಕೊಂಡವರು ಆಕ್ರಮಣಕಾರರಾದರು. ಆದರೆ ಭಾರತಾಂಬೆಯ ಅಂತಃಸತ್ವವನ್ನು ಅರಿತುಕೊಳ್ಳಲು ಹೊರಟವರು ಜ್ಞಾನಮಾರ್ಗದಲ್ಲಿ ಮೋಕ್ಷ ಸಾಧನೆಯತ್ತ ಸಾಗಿದರು. ಹೀಗೆ ಜಗತ್ತಿನ ಜನರಿಗೆ ಅವರವರ ಮನೋಧರ್ಮಕ್ಕೆ ಅನುಗುಣವಾಗಿ ಸ್ಪಂದಿಸಿದ ಶ್ರೇಷ್ಠ ಪರಂಪರೆ ಭಾರತದ್ದು ಎಂದು ಅಭಿಪ್ರಾಯಪಟ್ಟರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಹಸ್ರಾರು ಮಹಾನ್ ಪುರುಷರು ಸ್ವರಾಜ್ಯವೆಂಬ ಧ್ಯೇಯಕ್ಕಾಗಿ ಕಟಿಬದ್ಧರಾಗಿ ತಮ್ಮ ಸರ್ವಸ್ವವನ್ನು ಸಮರ್ಪಿಸಿಕೊಂಡಿದ್ದಾರೆ. ಅಂತಹ ವೀರರನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟ ಮಾತೆಯರ ತ್ಯಾಗವನ್ನು ಸ್ಮರಿಸಬೇಕಿದೆ. ಅವರ ತ್ಯಾಗವನ್ನು ಗೌರವಿಸುತ್ತಾ ಪ್ರೇರಣೆಯನ್ನು ಪಡೆದು ಕಾರ್ಯಪ್ರವೃತ್ತರಾಗಬೇಕಾದ ಅಗತ್ಯತೆ ನಮ್ಮ ಮುಂದಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕನ್ಯಾಡಿ ರಾಮಕ್ಷೇತ್ರದ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಸಮಾಜವನ್ನು, ಯುವಕರನ್ನು ಒಗ್ಗೂಡಿಸುವಲ್ಲಿ ಇಂತಹ ಉತ್ಸವಗಳು ಹಿಂದೆ ಕೆಲಸ ಮಾಡಿದ್ದವು. ಇನ್ನು ಮುಂದಿನ ದಿನಗಳಲ್ಲಿ ಅದರ ಅನಿವಾರ್ಯ ನಮಗಿಲ್ಲವೆಂದು ಕೈ ಬಿಡದೆ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸುಪ್ರೀತಾ ಕನ್ಯಾಡಿ ಅವರು ಮಹಿಳೆಯರಿಗೆ ನೇತೃತ್ವವನ್ನು ನೀಡಿದ ಕನ್ಯಾಡಿ ಯ ಹಿಂದು ಧಾರ್ಮಿಕ ಸೇವಾ ಸಮಿತಿ ಎಲ್ಲರಿಗೂ ಮಾದರಿಯಾಗಲಿ ಮಹಿಳೆಯರು ಧಾರ್ಮಿಕ ಕಾರ್ಯಗಳಲ್ಲಿ ಇನ್ನಷ್ಟು ಮುಂದೆ ಬಂದು ಹಿಂದು ಸಮಾಜವನ್ನು ಸಂಘಟಿಸುವ ಕಾರ್ಯವನ್ನು ಮಾಡಬೇಕು ಎಂದು ಅಧ್ಯಕ್ಷೀಯ ಮಾತುಗಳನ್ನು ನುಡಿದರು.

ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಹಾಗೂ ಹಿಂದೂ ಧಾರ್ಮಿಕ ಸೇವಾಸಮಿತಿ ಕನ್ಯಾಡಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಕನ್ಯಾಡಿಯ ನೂತನ ಕುಣಿತ ಭಜನಾ ತಂಡ ಭಕ್ತಪ್ರಿಯ ಶುಭಾರಂಭಗೊಂಡಿತು.ಪೃಥ್ವೀಶ್ ಧರ್ಮಸ್ಥಳ ನಿರೂಪಿಸಿದ ಕಾರ್ಯಕ್ರಮದಲ್ಲಿ ಸುದರ್ಶನ್ ಕನ್ಯಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬಜಿಲ ಸ್ವಾಗತಿಸಿ ಚಂದ್ರಾವತಿ ಬಜಿಲ ವಂದಿಸಿದರು.